ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಲವ್ ಜಿಹಾದ್, ಅಕ್ರಮ ಗೋ ಕಳ್ಳತನ, ಹಿಂದೂಗಳ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಬಿಜೆಪಿ ಮುಖಂಡರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅಶ್ವಿನಿ ಅವರಿಗೆ ಮನವಿ ಸಲ್ಲಿದರು. ರಾಜ್ಯ ಸರ್ಕಾರ ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರ ಮೇಲೆ ಸುಖಾ ಸುಮ್ಮನೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಮತಾಂದ ಮುಸ್ಲಿಮರಿಂದ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅನ್ಯ ಧರ್ಮದ ಶಕ್ತಿಗಳು ಅಪ್ರಾಪ್ತ ಬಾಲಕರಿಂದ ಹಿಂದೂ ಹುಡುಗಿಯರ ಮೇಲೆ ಲವ್ ಜಿಹಾದಿ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಪ್ರಕರಣವೇ ಸಾಕ್ಷಿ ಎಂದು ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಆರೋಪಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಅಕ್ರಮ ಗೋ ಸಾಗಾಟ ಎಗ್ಗಿಲ್ಲದಂತೆ ನಡೆಯುತ್ತಿದೆ. ಬಾಂಗ್ಲ ವಲಸಿಗರಿಂದ ನಡೆಯುತ್ತಿರುವ ಅಕ್ರಮ ಚಟುವಟಿಕೆ ಹಾಗೂ ಹಿಂದೂ ಅಪ್ರಾಪ್ತ ಬಾಲಕಿಯರ ಒಲಿಸಿಕೊಂಡು ಮಾಡುವ ಲವ್ ಜಿಹಾದ್ ತಡೆಗಟ್ಟಿ ಬಾಲಕಿಯನ್ನು ರಕ್ಷಿಸಲು ಹೋದ ಹಿಂದೂ ಸಂಘಟನೆ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸು ತ್ತಿರುವುದು ಖಂಡನೀಯ. ಹಿಂದೂ ಸಂಘಟಕರ ವಿರುದ್ಧ ಹಾಕಿದ ಸುಳ್ಳು ಪ್ರಕರಣ ಕೂಡಲೇ ವಾಪಾಸು ಪಡೆಯಬೇಕು. ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಬಾಂಗ್ಲ ವಲಸಿಗರನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಕೆ.ಸಿ.ರತನ್, ಪಂಚಾಕ್ಷರಿ, ಎಂ.ಎಸ್.ಸುಜಿತ್, ಧನಿಕ್ ಕೋಡದಿಣ್ಣೆ, ಜೆ.ಎಸ್.ಸುದೇವ್, ಪ್ರಶಾಂತ್ ಬಿಳಗುಳ, ಕಲ್ಲೇಶ್, ಪರೀಕ್ಷಿತ್, ಆದರ್ಶ್ ಕನ್ನಳ್ಳಿ, ಯತೀಶ್ ಕೂಡುವಳ್ಳಿ, ಸಂದೀಪ್ ಕೆಲ್ಲೂರು, ಪುಟ್ಟಮ್ಮ, ಶುಶೀಲಮ್ಮ ಇದ್ದರು. ---ಪೋಟೊ---

ಮೂಡಿಗೆರೆ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.