ಸಾರಾಂಶ
- ಮುಖ್ಯ ಶಿಕ್ಷಕರ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ: ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಕಿಡಿ
- ಮಾನಸಿಕ ಕಿರುಕುಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಬಿಆರ್ಸಿ, ತಹಸೀಲ್ದಾರ್ಗೆ ಮನವಿ - ಎಸ್ಡಿಎಂಸಿ ಸಂಘ ಹೆಸರಿನಲ್ಲಿ ಶಿವಲಿಂಗಪ್ಪ ಎಂಬವರಿಂದ ಬಿಇಒಗೆ ದೂರು ಖಂಡನೀಯ- - -
ಕನ್ನಡಪ್ರಭ ವಾರ್ತೆ ಹೊನ್ನಾಳಿಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ (ಎಸ್ಡಿಎಂಸಿ ಸಂಘ) ಹೆಸರಿನಲ್ಲಿ ಎ.ಎಸ್. ಶಿವಲಿಂಗಪ್ಪ ಅವರು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಇಡೀ ಶಿಕ್ಷಕ ಸಮುದಾಯಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸೆ.8ರಂದು ಆಧಾರರಹಿತ ದೂರು ನೀಡಿದ್ದಾರೆಂದು ಆರೋಪಿಸಿ, ತಾಲೂಕು ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ. ಶಾಲಾ ಶಿಕ್ಷಣ ಇಲಾಖೆಯ ಬಿ.ಆರ್.ಸಿ. ಹಾಗೂ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಈ ಸಂದರ್ಭ ಮಾತನಾಡಿ, ಎಸ್.ಡಿ.ಎಂ.ಸಿ. ಹೆಸರಿನಲ್ಲಿ ಎ.ಎಸ್. ಶಿವಲಿಂಗಪ್ಪ ಹುಣಸಘಟ್ಟ ಅವರು ಶಿಕ್ಷಕ ಸಮುದಾಯ ಬಗ್ಗೆ ಹಲವಾರು ರೀತಿಯ ಅಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದರಿಂದ ಹೊನ್ನಾಳಿ, ನ್ಯಾಮತಿ ಆವಳಿ ತಾಲೂಕುಗಳ ಪುರುಷ ಮತ್ತು ಮಹಿಳಾ ಶಿಕ್ಷಕರ ಮನೋಸ್ಥೈರ್ಯ ಕುಗ್ಗುವಂತಾಗಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಬೇಕು. ಮೇಲುಸ್ತುವಾರಿ ಸಮಿತಿ ಸರ್ಕಾರದಿಂದ ಮಾನ್ಯತೆ ಪಡೆದ ಸಂಘವೇ? ಪಡೆದಿದ್ದಲ್ಲಿ ಇದರ ಅಧಿಕಾರ ವ್ಯಾಪ್ತಿಗಳೇನು ಎಂಬ ಬಗ್ಗೆ ತಿಳಿಸಲು ಅಧಿಕಾರಿಗಳಿಗೆ ಮನವಿ ಮಾಡಿದರು.ಎಸ್ಡಿಎಂಸಿ ಸಂಘದ ಎ.ಎಸ್. ಶಿವಲಿಂಗಪ್ಪ ಅವರು ಹೊನ್ನಾಳಿ ಮತ್ತು ನ್ಯಾಮತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಬೆಳಗ್ಗೆ 9.30ಕ್ಕೆ ಬಯೋಮೆಟ್ರಿಕ್ ಹಾಜರಾತಿ ನೀಡಿ ವೈಯಕ್ತಿಕ ಕೆಲಸಗಳಿಗೆ ಹೋಗುತ್ತಾರೆ, ಪುನಃ ಮಧ್ಯಾಹ್ನ ಅಥವಾ ಸಂಜೆ ಬಂದು ಬಯೋಮೆಟ್ರಿಕ್ ಹಾಜರಾತಿ ನೀಡಿ ಹಾಜರು ಎಂದು ತೋರಿಸುತ್ತಿರುವುದಾಗಿ ದೂರಿದ್ದಾರೆ. ಈ ರೀತಿ ಅರೋಪ ಬಗ್ಗೆ ಅವರ ಬಳಿ ಇರುವ ನೈಜ ಮತ್ತು ನಿಖರ ಮಾಹಿತಿಗಳನ್ನು ಇಲಾಖೆಗೆ ನೀಡಲಿ ಎಂದು ಹೇಳಿದರು.
ಶಿಕ್ಷಕರು ಶಾಲೆಗೆ ಹೋಗದೇ ಪಾಠ- ಪ್ರವಚನವನ್ನು ಮಾಡದೇ ಇರುವುದರಿಂದ ಎಷ್ಟು ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ ಹಾಗೂ ಈ ಬಗ್ಗೆ ಪೋಷಕರು ನೀಡಿರುವ ದೂರುಗಳ ಸಂಖ್ಯೆ ಎಷ್ಟು, ಇದಲ್ಲದೇ ಎ.ಎಸ್. ಶಿವಲಿಂಗಪ್ಪ ಅವರು ಹಲವಾರು ಶಾಲೆಗಳ ತರಗತಿಗಳಿಗೆ ಹೋಗಿ ಅತಿಕ್ರಮಣ ಪ್ರವೇಶ ಮಾಡುವುದು, ಮಹಿಳಾ ನೌಕರರ ಛಾಯಾಚಿತ್ರ ತೆಗೆಯುತ್ತಾರೆ, ಮುಖ್ಯ ಶಿಕ್ಷಕರ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹಲವಾರು ಶಾಲೆಗಳ ಶಿಕ್ಷಕರು ತಮಗೆ ತಿಳಿಸಿದ್ದಾರೆ. ಇದರಿಂದ ಶಿಕ್ಷಕರಿಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ ಎಂದು ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಿಂದ ನೂರಾರು ಶಿಕ್ಷಕರು ಬಿಇಒ ಕಚೇರಿಗೆ ತೆರಳಿ ಶಾಲಾ ಶಿಕ್ಷಣ ಸಮನ್ಯಯ ಅಧಿಕಾರಿ (ಬಿಆರ್ಸಿ) ತಿಪ್ಪೇಶಪ್ಪ ಅವರಿಗೆ ಮನವಿ ಸಲ್ಲಿಸಿದರು. ಅನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಸಿ.ರಾಜೇಶ್ ಕುಮಾರ್ಗೂ ಮನವಿ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಚ್.ಕೆ. ಚಂದ್ರಶೇಖರ್, ನೌಕರರ ಸಂಘದ ಕಾರ್ಯದರ್ಶಿ ನಾಗರಾಜ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕರಿಬಸಯ್ಯ, ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷೆ ನೀಲಮ್ಮ, ಸಹ ಕಾರ್ಯದರ್ಶಿ ಜಿ.ಗೀತಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜ್ ಕುಮಾರ್, ಪ್ರಕಾಶ್ ಕುಮಾರ್, ಎನ್.ಪಿ.ಎಸ್. ಸಂಘದ ಪ್ರಕಾಶ ನಾಯ್ಕ, ನ್ಯಾಮತಿ ಸಂಘದ ಅಧ್ಯಕ್ಷ ಸಿದ್ದಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಕೃಷ್ಣನಾಯ್ಕ ಎಚ್. ಸೇರಿದಂತೆ ಹಲವಾರು ಶಿಕ್ಷಕರು, ಸಂಘದ ಪದಾಧಿಕಾರಿಗಳು ಇದ್ದರು.- - -
-11ಎಚ್.ಎಲ್.ಐ1:ಪ್ರತಿಭಟನೆಯಲ್ಲಿ ಶಿಕ್ಷಕರು ಬಿ.ಆರ್.ಸಿ., ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.