ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ

ಗುಣಮಟ್ಟದ ಹಾಗೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಚನ್ನೇನಹಳ್ಳಿ, ಪೂಮಡಿಹಳ್ಳಿ ಸೇರಿ ೨೦ಕ್ಕೂ ಹೆಚ್ಚು ಗ್ರಾಮಗಳ ರೈತರು ಹಿರೀಸಾವೆ ಸೆಸ್ಕ್ ಶಾಖಾಧಿಕಾರಿಗಳ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಎಇಇ ವಜ್ರ ಕುಮಾರ್ ಆಗಮಿಸಿದರು. ಅವರನ್ನು ಕಚೇರಿ ಮುಂದೆಯೇ ತಡೆದು ನಿಲ್ಲಿಸಿದ ರೈತರು, ವಿದ್ಯುತ್ ಸಮಸ್ಯೆ ಕುರಿತು ತಮ್ಮ ಅಳಲನ್ನು ತೋಡಿಕೊಂಡರು. ಶೀಘ್ರ ಬಗೆಹರಿಸುವಂತೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಿಮಕಿ ನಡೆಯಿತು.

ಸರ್ಕಾರದ ಆದೇಶದಂತೆ ರೈತರ ಪಂಪ್ ಸೆಟ್ ಸಲುವಾಗಿ ತ್ರಿ ಫೇಸ್ ಲೈನನ್ನು ದಿನದಲ್ಲಿ ೭ ಗಂಟೆಗಳ ಕಾಲ ಪೂರೈಕೆ ಮಾಡಬೇಕು. ಆದರೆ ರಾತ್ರಿ ವೇಳೆ ಕೇವಲ ೨ಗಂಟೆ ಹಾಗೂ ಹಗಲು ಸಮಯದಲ್ಲಿ ೧ ಗಂಟೆ ಕಾಲ ನೀಡಲಾಗುತ್ತಿದೆ. ಅದರಲ್ಲಿಯೂ ಲೋಡ್ ಶೆಡ್ಡಿಂಗ್ ಹಾಗೂ ಎಲ್ ಸಿ ನೆಪ ತೋರಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಬೇಸಿಗೆ ಪ್ರಾರಂಭವಾಯಿತು ಎಂದರೆ ಸಾಕು ರೈತರಿಗೆ ಬೆವರಿನ ಬದಲು ಕಣ್ಣೀರು ಹರಿಯುತ್ತದೆ. ವಿದ್ಯುತ್ ಸಮಸ್ಯೆ ಭೂತವಾಗಿ ಕಾಡುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ಬೆಳೆಗಳು ಹಾಗೂ ಹೈನುಗಾರಿಕೆಗೆ ಶಾಪವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಇನ್ನು ವಿದ್ಯುತ್ ಪರಿವರ್ತಕ ಸುಟ್ಟು ಹೋದರೆ ೧ ತಿಂಗಳು ಅಲೆದರೂ ಬದಲಾಯಿಸುವುದಿಲ್ಲ. ೧೫ ರಿಂದ ೨೦ ಸಾವಿರ ಹಣ ಕೇಳುತ್ತಾರೆ. ೪೮ ಗಂಟೆಯೊಳಗೆ ಪರಿವರ್ತಕ ಬದಲಾಯಿಸಬೇಕೆಂಬ ನಿಯಮವಿದ್ದರೂ ಇಲ್ಲಿ ತಿಂಗಳು ಕಳೆದರೂ ಗಮನ ಹರಿಸುವುದಿಲ್ಲ. ಇದರಿಂದ ಕಬ್ಬು ಸೇರಿ ವಿವಿಧ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಚನ್ನೇನಹಳ್ಳಿ ಯುವ ರೈತ ದಿಲೀಪ್ ಆರೋಪಿಸಿದರು.

ಬೊಮ್ಮೇನಹಳ್ಳಿ ಗ್ರಾಮದ ರೈತ ಶಿವರಾಮೇಗೌಡ ಮಾತನಾಡಿ, ವಿದ್ಯುತ್ ಸಮಸ್ಯೆ ಸಂಬಂಧ ಕರೆ ಮಾಡಿದರೆ ಅಧಿಕಾರಿಗಳು ಸ್ವೀಕರಿಸುವುದಿಲ್ಲ. ಲೈನ್ ಮ್ಯಾನ್ ಗಳನ್ನು ಕೇಳಿದರೆ ಎಲ್ ಸಿ ತೆಗೆದುಕೊಂಡಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಲೈನ್ ಮ್ಯಾನ್ ಗಳು ಯಾವುದೋ ಅಂಗಡಿ ಮುಂದೆ ಕುಳಿತಿರುತ್ತಾರೆ ಎಂದು ಆರೋಪಿಸಿದರು.

ಎಇಇ ವಜ್ರಕುಮಾರ್ ಉತ್ತರಿಸಿ, ಸಮಸ್ಯೆ ಬಗೆಹರಿಸಲು ಹೊಸ ವಿಧಾನದಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಐದಾರು ದಿನಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಶಾಖಾಧಿಕಾರಿ ವೆಂಕಟೇಶ್, ಕಸರನಹಳ್ಳಿ ಗ್ರಾಮದ ಪಟೇಲ್ ಕೃಷ್ಣ, ಮಂಜುನಾಥ್, ಗೋಪಾಲ್, ಮಹೇಶ್, ಬೊಮ್ಮೇನಹಳ್ಳಿ ಗ್ರಾಮದ ರಾಜು, ರವಿ ಗೌಡ, ಶಿವರಾಮೇಗೌಡ, ನಂಜೇಗೌಡ, ಬಸವೇಗೌಡ, ಕುಮಾರ್, ರುದ್ರೇಗೌಡ, ಶಿವರುದ್ರೇಗೌಡ, ಗಂಗಾಧರ್, ಬಸವರಾಜ್, ವಾಸು, ಮಂಜೇಗೌಡ ಹಾಗೂ ಇತರರು ಇದ್ದರು.