ಸಮರ್ಪಕ ವಿದ್ಯುತ್‌ ನೀಡಲು ಆಗ್ರಹಿಸಿ ಪ್ರತಿಭಟನೆ

| Published : Feb 26 2025, 01:01 AM IST

ಸಾರಾಂಶ

ಸಮರ್ಪಕ ವಿದ್ಯುತ್‌ ಸರಬರಾಜಿಗೆ ಆಗ್ರಹಿಸಿ ತಾಲೂಕಿನ ರೈತ ಸಂಘದ ಸದಸ್ಯರು ಬೆಸ್ಕಾಂ ಕಚೇರಿ ಆವರಣದಲ್ಲಿಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಮರ್ಪಕ ವಿದ್ಯುತ್‌ ಸರಬರಾಜಿಗೆ ಆಗ್ರಹಿಸಿ ತಾಲೂಕಿನ ರೈತ ಸಂಘದ ಸದಸ್ಯರು ಬೆಸ್ಕಾಂ ಕಚೇರಿ ಆವರಣದಲ್ಲಿಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸ್ ನಿಲ್ದಾಣ ಬಳಿ ಜಮಾಯಿಸಿದ್ದ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನೂರಾರು ರೈತರು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ಮಾಡಿ ನಂತರ ಬೆಸ್ಕಾಂ ಕಚೇರಿ ಕಡೆಗೆ ಪಾದಯಾತ್ರೆ ಮೂಲಕ ತೆರಳಿದರು.

ಈ ವೇಳೆ ಮಾತನಾಡಿದ ಮುಖಂಡರು, ಸಮರ್ಪಕ ವಿದ್ಯುತ್ ಸರಬರಾಜು ಮಾಡದೆ ಬೆಸ್ಕಾಂ ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ಸರ್ಕಾರ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಆದೇಶ ಹೊರಡಿಸುವ ಮೂಲಕ ಕೃಷಿ ಕ್ಷೇತ್ರವನ್ನೇ ಖಾಸಗೀಕರಣ ಗೊಳಿಸಲು ಹುನ್ನಾರ ನಡೆಸಿದೆ. ರಾಜ್ಯದ 45 ಲಕ್ಷ ಪಂಪ್ ಸೆಟ್ ಗಳಿಗೆ ಕರೆಂಟ್ ನೀಡಲು ಸೋತ ಸರ್ಕಾರ ಈಗ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾ ಶಂಕರ ಸ್ವಾಮೀಜಿ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿ, ಮನುಷ್ಯ ಕುಲವನ್ನು ಉಳಿಸುವ ರೈತ ವರ್ಗವನ್ನು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸ್ವಾಭಿಮಾನಿ ರೈತರು ಯಾವ ಉಚಿತವನ್ನು ಕೇಳುವುದಿಲ್ಲ. ಕರೆಂಟ್ ಮತ್ತು ನೀರು ಒದಗಿಸಿದರೆ ಇಡೀ ದೇಶವನ್ನೇ ಉಳಿಸಿ ಅನ್ನದ ಕೊರತೆ ನೀಗಿಸುತ್ತಾನೆ. ಇಂತಹ ರೈತರ ಬಗ್ಗೆ ಸರ್ಕಾರ ಗಮನಹರಿಸಿ ಅವಶ್ಯ ಸವಲತ್ತು ಒದಗಿಸಬೇಕು ಎಂದು ಆಗ್ರಹಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಯುವ ಘಟಕದ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಚಿಕ್ಕಭೈರೇಗೌಡ, ಗಂಗಹನುಮಯ್ಯ, ಶಬ್ಬೀರ್ ಪಾಷಾ ಸೇರಿದಂತೆ ಅನೇಕರಿದ್ದರು.