ತಾಲೂಕಿನ ತೋರಣದಿನ್ನಿ ಕ್ರಾಸ್ ಹತ್ತಿರ 62, 63, 65, 66, 69, 71, 73 ವಿತರಣಾ ಕಾಲುವೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ, ಸಸಿ ಮಡಿಗಳು ಒಣಗುತ್ತಿವೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ಮಸ್ಕಿ: ತಾಲೂಕಿನ ತೋರಣದಿನ್ನಿ ಕ್ರಾಸ್ ಹತ್ತಿರ 62, 63, 65, 66, 69, 71, 73 ವಿತರಣಾ ಕಾಲುವೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ, ಸಸಿ ಮಡಿಗಳು ಒಣಗುತ್ತಿವೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸ್ಥಳದಲ್ಲಿ ಶಾಸಕರು, ರೈತ ಮುಖಂಡರು ರೈತರ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.ನೀರಾವರಿ ಇಲಾಖೆ ಎಸ್ ಸಿ ಸತ್ಯನಾರಾಯಣ ಶೆಟ್ಟಿ ಮಾತನಾಡಿ, ಮಳೆ ಇಲ್ಲದೆ ಬರಗಾಲ ಉಂಟಾಗಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ, ಇದರಿಂದಾಗಿ ಕೆಳಭಾಗಕ್ಕೆ ನೀರು ತಲುಪದ ಕಾರಣ ತ್ರಡ್ ಎತ್ತುವುದರಲ್ಲಿ ವ್ಯತ್ಯಾಸವಾಗಿದೆ, ರೈತರು ಸಹಕರಿಸಬೇಕು ಎಂದರು. ಈ ವೇಳೆ ಆಕ್ರೋಶಗೊಂಡ ರೈತರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.
ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ, ರೈತರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೀರನ್ನು ಸಮರ್ಪಕವಾಗಿ ಹರಿಸಬೇಕು, ರೈತರಿಗೆ ಬೆದರಿಸಿ ಥ್ರೆಡ್ ಇಳಿಸುವುದು ಮಾಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ರೈತರ ಮೇಲೆ ಕೇಸ್ ಮಾಡಿದರೆ ನಾವೇ ಬಂದು ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಇಇ ಕೋದಂಡ ರಾಮ, ಎಇಇ ವಿದ್ಯಾಸಾಗರ, ಜೆ ಇ ಹನುಮಂತಪ್ಪ, ತಹಸೀಲ್ದಾರ್ ಮಂಜುನಾಥ ಬೋಗಾವತಿ, ರೈತ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಚಂದ್ರಕಾಂತ ಪಾಟೀಲ್, ಮೃತ್ಯುಂಜಯ ಸ್ವಾಮಿ, ವೆಂಕಟರಡ್ಡಿ ಸೇರಿ ಮಲ್ಕಪುರು, ಮರಕಂದಿನ್ನಿ, ಉದ್ಭಳ, ತೋರಣದಿನ್ನಿ, ಚಿಕ್ಕ ಉದ್ಭಳ್, ಜಂಗಮರಹಳ್ಳಿ, ಚಿಕ್ಕದಿನ್ನಿ, ಹಿರೇದಿನ್ನಿ, ಗಳಿದುರಗಮ್ಮ ಕ್ಯಾಂಪ್, ಗೊಗೆಬಾಳ, ಬಸಾಪುರು ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.