ಸಾರಾಂಶ
ಗದಗ: ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ ಬೆಟಗೇರಿಯ ವೃತ್ತಿಪರ ನೇಕಾರರು ಹಾಗೂ ರಾಜ್ಯದ ಎಲ್ಲ ನೇಕಾರರು ಶುಕ್ರವಾರ ಬೆಳಗಾವಿ ಸುವರ್ಣಸೌಧ ಚಲೋ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗದಗ-ಬೆಟಗೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ನೇಕಾರರು ಹೋರಾಟದಲ್ಲಿ ಭಾಗಿಯಾಗಿದ್ದು, ನೇಕಾರರ ಬೇಡಿಕೆ ಇತ್ಯರ್ಥವಾಗುವವರೆಗೂ ನಮ್ಮ ಹೋರಾಟ ಮುಂದುವರಿಸುವುದಾಗಿ ಮನವಿ ಸಲ್ಲಿಸಿದರು.ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ 53 ಜನ ನೇಕಾರರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡಬೇಕು, 55 ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ ₹ 5 ಸಾವಿರ ಪಿಂಚಣಿ, ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರಿಗೂ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ನೇಕಾರರ ಅಹವಾಲು ಸ್ವೀಕರಿಸಿ ನಿಮ್ಮ ಬೇಡಿಕೆಗಳನ್ನು ಸರ್ಕಾರ ಮಟ್ಟದಲ್ಲಿ ಇತ್ಯರ್ಥ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ರಾಜು ದಡಿ, ಮಾಧುಸಾ ಮೇರವಾಡೆ, ವಿರೂಪಾಕ್ಷ ಐಲಿ, ಬಸವರಾಜ್ ಕರಿ, ಪ್ರಕಾಶ್ ಹಿಂಡಿ, ನಾರಾಯಣ ಗೋಟೂರ, ಕೃಷ್ಣ ಕೊಪ್ಪರದ, ನಾರಾಯಣಪ್ಪ ಕೋಣಿ, ಹುಲಕುಂಟೆಪ್ಪ ಗೋಟೂರ, ಶಂಕ್ರಪ್ಪ ಮಾದಗುಂಡಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ ಬೆಟಗೇರಿ ಮತ್ತು ರಾಜ್ಯದ ಎಲ್ಲ ವೃತ್ತಿಪರ ನೇಕಾರ ಬಾಂಧವರು ಹೋರಾಟದಲ್ಲಿ ಭಾಗಿಯಾಗಿದ್ದರು.