ಹಾವೇರಿ: ಎಐಟಿಯುಸಿ ಸೇರಿದಂತೆ ಅಂಗನವಾಡಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದೇಶವ್ಯಾಪಿ ಕರೆ ನೀಡಿರುವ ಪ್ರತಿಭಟನೆ ಬೆಂಬಲಿಸಿ ಹಾಗೂ ವಿವಿಧ ವಲಯದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಗಸಿಬಾಗಿಲ ಮಾತನಾಡಿ, ಕಾರ್ಮಿಕ ವರ್ಗಕ್ಕೆ ಮಾರಕವಾಗಿರುವ ಮತ್ತು ಕಾರ್ಪೋರೇಟ್ ಹಿತ ರಕ್ಷಿಸುವಂತಹ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಈ ಮೊದಲು ಜಾರಿಯಲ್ಲಿದ್ದ ಕಾರ್ಮಿಕ ಕಾನೂನುಗಳನ್ನು ಮರು ಸ್ಥಾಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಎಲ್ಲಾ ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ವೇತನ 26 ಸಾವಿರ ರು. ಜಾರಿಗೊಳಿಸಬೇಕು. ಜತೆಗೆ 10 ಸಾವಿರ ರು. ಮಾಸಿಕ ಪಿಂಚಣಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದಿಕರಣಕ್ಕೆ ಅವಕಾಶ ಮಾಡಿಕೊಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪೂರ್ಣಕಾಲಿಕ ಉದ್ಯೋಗಿಗಳಾಗಿದ್ದು, ಅವರನ್ನು ಕಾಯಂ ಉದ್ಯೋಗಿಯಾಗಿ ಪರಿಗಣಿಸಬೇಕು. ಕನಿಷ್ಠ ವೇತನ, ಪೆನ್ಷನ್, ಗ್ರ್ಯಾಚುಟಿ ಸೌಲಭ್ಯವನ್ನು ಜಾರಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಕ್ರಮವಾಗಿ ಸಿ ದರ್ಜೆ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಅಧ್ಯಕ್ಷೆ ಸುನಂದಾ ರೇವಣಕರ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆಯ ತಡೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ಉದ್ಯೋಗಿಗಳಿಗೆ ಸರ್ಕಾರ ಗೌರವಧನ ಹೆಚ್ಚಿಸದೆ ಅನ್ಯಾಯ ಮಾಡಿದೆ. ಸರ್ಕಾರ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸಬೇಕು. ಮೊಬೈಲ್ ತಂತ್ರಜ್ಞಾನದಿಂದ ಹಲವು ಬಗೆಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದು, ಪದೆ ಪದೆ ಸರ್ವರ್ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಸರ್ವರ್ ಸಮಸ್ಯೆ ಬಗೆಹರಿಸುವ ಇಲ್ಲವೇ ಪದ್ಧತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.ಈ ವೇಳೆ ಮಾಂತೇಶ ಮಡಿವಾಳರ, ಬಸವರಾಜ ಮೇಗಳಗೇರಿ, ಸಂತೋಷ ಮುದ್ದಿö, ಕಾಸೀಂಸಾಬ ಕೆರೂಡಿ, ಲಲಿತಾ ಬುಶೆಟ್ಟಿ, ನಾಗಮ್ಮ ಕೋಣನತಂಬಿಗಿ, ನಾಗಮ್ಮ ಮುದಕಣ್ಣನವರ, ಸುನಿತಾ ಮರಕಳಿ, ಪ್ರೇಮಾ ಬೂದಾಪುರ, ಸುನೀತಾ ದಂಡಗೀಹಳ್ಳಿ, ಸಲ್ಮಾಬಾನು ಅತ್ತಾರ, ನಾಗರತ್ನಾ ಎಲಿಗಾರ, ಕುಸುಮಾ ಪಾಟೀಲ, ಸುನಂದಾ ಮಡ್ಲೂರ, ಮಲ್ಲಮ್ಮ ಬಣಕಾರ, ಆಶಾ ಮುದಿಗೌಡ್ರ, ಲಲಿತಾ ಪೂಜಾರ, ನಾಗಮ್ಮ ಬಣಕಾರ, ಸರಸ್ವತಿ ಚಳಗೇರಿ, ಗುತ್ತೆಮ್ಮ ಪಾಟಪ್ಪನವರ, ಅಶ್ವಿನಿ ಆರೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.