ಉಪನೋಂದಣಿ ಕಚೇರಿ ಒಳಗಡೆ ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕರಿಂದ ರಾಜ್ಯದ ಎಲ್ಲ ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು.
ಮುಂಡರಗಿ: ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿ ಕಾರ್ಯದಲ್ಲಿ ಆಗಿರುವಂತ ಲೋಪದೋಷ ಸರಿಪಡಿಸಬೇಕು. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಿದ್ದು, ಅದರಂತೆ ರಾಜ್ಯದಲ್ಲೂ ಸರ್ಕಾರ ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು ಎಂದು ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟ ಸಂಘಟನಾ ಕಾರ್ಯದರ್ಶಿ ಹನುಮಂತ ಚನ್ನದಾಸರ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿ, ಉಪನೋಂದಣಿ ಕಚೇರಿ ಒಳಗಡೆ ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕರಿಂದ ರಾಜ್ಯದ ಎಲ್ಲ ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು. ಜಿಲ್ಲಾ ದಸ್ತಾವೇಜು ಪತ್ರ ಬರಹಗಾರರಿಗೆ ಸರ್ಕಾರದಿಂದ ಸೇವಾ ಭದ್ರತೆ ಒದಗಿಸಬೇಕು. ಇತ್ತೀಚೆಗೆ ಗಣಕೀಕೃತ ಇ- ಸ್ವತ್ತು ಮತ್ತು ಇ- ಆಸ್ತಿ ದಾಖಲೆಗಳಿಂದ ನೋಂದಣಿಗೆ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ಡಿ.16ರಂದು ಬೆಳಗಾವಿ ಸುವರ್ಣಸೌಧ ಅಧಿವೇಶನ ಚಲೋ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪತ್ರಗಾರರಾದ ಎಸ್.ಬಿ. ಜೋಶಿ, ಪ್ರವೀಣ ಉಪ್ಪಾರ, ನಾಗರಾಜ ಹೊಂಬಳಗಟ್ಟಿ, ಸೋಮನಗೌಡ ಗೌಡ್ರ, ನಜೀರಸಾಬ ಬೆಟಗೇರಿ, ಮಲ್ಲಪ್ಪ ಹಂದ್ರಾಳ, ಗುಗ್ಗರಿ ಇತರರು ಇದ್ದರು.ರೋಣದಲ್ಲಿ ದಸ್ತು ಬರಹಗಾರ ಪ್ರತಿಭಟನೆರೋಣ: ಸೇವಾ ಭದ್ರತೆ, ಪ್ರತ್ಯೇಕ ಲಾಗಿನ್, ಗುರುತಿನ ಚೀಟಿ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ದಸ್ತು(ಪತ್ರ) ಬರಹಗಾರರ ಒಕ್ಕೂಟ ಮತ್ತು ದಸ್ತು ಬರಹಗಾರರ ಕ್ಷೇಮಾಭಿವೃದ್ಧಿ ಸಂಘ ರೋಣ ಘಟಕ ವತಿಯಿಂದ ಕಚೇರಿ ಎದುರು ಸೋಮವಾರ ಪ್ರತಿಭಟನೆ ಜರುಗಿತು.ಈ ವೇಳೆ ದಸ್ತು ಬರಹಗಾರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಅಮರೇಶ ಅಂಗಡಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದ ಕಾವೇರಿ 2 ತಂತ್ರಾಂಶ ಅಳವಡಿಕೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಸಿಟಿಜನ್ ಲಾಗಿನ್ ಬದಲು ಪ್ರತ್ಯೇಕವಾಗಿ ಪತ್ರ ಬರಹಗಾರರಿಗೆ ಲಾಗಿನ್ ನೀಡಬೇಕು. ದಸ್ತು ಬರಹಗಾರರಿಗೆ ಸೇವಾ ಭದ್ರತೆ ಒದಗಿಸಬೇಕು. ಜತೆಗೆ ಪ್ರತ್ಯೇಕವಾಗಿ ಗುರುತಿನ ಚೀಟಿ ಒದಗಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ನಾಗರಾಜ ಕೆ. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಅಮರೇಶ ಅಂಗಡಿ, ಸುನೀಲ ಜಾಲಿಹಾಳ, ಉಮೇಶ ಕಿರೇಸೂರ, ಲಿಂಗಪ್ಪ ಲಿಂಗಶೆಟ್ಟಿ, ಶೇಖರಗೌಡ ಬಸನಗೌಡ್ರ, ಅಲ್ಲಾಸಾಬ ಗುದಗನೂರ, ನಾಗರಾಜ ಶಿರಹಟ್ಟಿ ಮುಂತಾದವರು ಭಾಗವಹಿಸಿದ್ದರು.