ಶಹಾಪುರ ತಾಲೂಕುವೊಂದನ್ನೇ ಮಾತ್ರ "ಬರಪೀಡಿತ " ಎಂದು ಘೋಷಿಸಿರುವ ಸರ್ಕಾರ, ಜಿಲ್ಲೆಯ ಇನ್ನುಳಿದ ಐದು ತಾಲೂಕಗಳನ್ನು "ಬರಪೀಡಿತ " ಎಂದು ಘೋಷಣೆ ಮಾಡದೆ, ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿ, ಗುರುವಾರ ನಗರದ ತಹಸೀಲ್ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಶಹಾಪುರ ತಾಲೂಕುವೊಂದನ್ನೇ ಮಾತ್ರ "ಬರಪೀಡಿತ " ಎಂದು ಘೋಷಿಸಿರುವ ಸರ್ಕಾರ, ಜಿಲ್ಲೆಯ ಇನ್ನುಳಿದ ಐದು ತಾಲೂಕಗಳನ್ನು "ಬರಪೀಡಿತ " ಎಂದು ಘೋಷಣೆ ಮಾಡದೆ, ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿ, ಗುರುವಾರ ನಗರದ ತಹಸೀಲ್ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಿತು.

ಜಿಲ್ಲಾಧ್ಯಕ್ಷ ಭೀಮು ನಾಯಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮಳೆಯು ಜೂನ್ ತಿಂಗಳಲ್ಲಿ ಆರಂಭವಾಗಿರುತ್ತದೆ. ಜೂನ್ ಮೊದಲನೇ ವಾರದಲ್ಲಿ ಬಿದ್ದಂತಹ ಭಾರಿ ಮಳೆಯಿಂದ ರೈತರ ಮುಖದಲ್ಲಿ ಮಂದಾಸ ಮೂಡಿ, ಬಿತ್ತನೆಯ ಆರಂಭಿಸಿದ್ದರು. ಶೇ. 90% ರಷ್ಟು ಬಿತ್ತನೆ ಮಾಡಿದಂತಹ ರೈತರು ಜೂನ್ ಅಂತ್ಯ ಜುಲೈ ಮೊದಲನೇ ವಾರದವರೆಗೆ ಮಳೆ ಬಾರದೇ ಬಿತ್ತಿದಂತಹ ಹೆಸರು, ತೊಗರಿ, ಹತ್ತಿ ಮುಂತಾದ ಬೆಳೆಗಳಿಗೆ ತೇವಾಂಶದ ಕೊರತೆಯಿಂದ ಶೇ.50% ರಷ್ಟು ಮಾತ್ರ ಮೊಳಕೆ ಬಂದಿರುತ್ತದೆ.

ಮಳೆ ಕೊರತೆಯಿಂದ ಉಳಿದ ಶೇ 50 % ರಷ್ಟು ಮೊಳಕೆ ಬಾರದೇ ಹಾನಿಯಾಗಿರುತ್ತದೆ. ರೈತರು ಸಂಕಷ್ಟಕ್ಕೆ ಸಿಲುಕಿ ಪುನಃ 2ನೇ ಬಾರಿ ಬಿತ್ತನೆ ಮಾಡಿದರೂ ಮಳೆಯ ಕೊರತೆಯಿಂದ ಪುನಃ ಮೊಳಕೆ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. ಒಣ ಬೇಸಾಯಕ್ಕೆ ಪ್ರತಿ ಎಕರೆಗೆ 30-40 ಸಾವಿರ ಮತ್ತು ನೀರಾವರಿಗೆ ಪ್ರತಿ ಎಕರೆಗೆ 45-50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿಕೊಂಡಿರುತ್ತಾರೆ. ಸಾಲ-ಸೊಲ ಮಾಡಿ ರೈತರು ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ ರೈತರ ಸಹಾಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಬೆನ್ನಿಗೆ ನಿಲ್ಲುವುದು ಮತ್ತು ಸೂಕ್ತ ಪರಿಹಾರವನ್ನು ನೀಡಬೇಕಾಗಿರುತ್ತದೆ, ಆದರೆ ಈ ಭಾಗದ ರೈತರಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದ್ದಾರೆಂದು ಕಿಡಿ ಕಾರಿದರು.

ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಮಾತನಾಡಿ, ಶಹಾಪೂರ ತಾಲೂಕು ಒಂದೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸರ್ಕಾರ ಉಳಿದ 5 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡದೇ ಅನ್ಯಾಯ ಮಾಡಿದೆ. ಯಾದಗಿರಿ ಜಿಲ್ಲೆಯ ರೈತಾಪಿ ವರ್ಗದ ಜನರಿಗೆ ಮಳೆ ಇಲ್ಲದೆ ಬೆಳೆ ಶೇ.100% ನಷ್ಟವಾಗಿದೆ. ಅಂತರ್ಜಲ ಕುಸಿದು, ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಭಾಗದ ರೈತರು, ಕೂಲಿಕಾರ್ಮಿಕರಿಗೆ ಕೆಲಸವಿಲ್ಲದೇ ಹೊಟ್ಟೆ ಪಾಡಿಗಾಗಿ ದಿನನಿತ್ಯ ಸಾವಿರಾರು ಜನರು ಬೆಂಗಳೂರು ಮತ್ತು ಮುಂಬೈ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ರೈತರು ಸಂಕಷ್ಟ ಸ್ಥಿತಿಯಲ್ಲಿರುವಾಗ ಬರಗಾಲದ ವಾಸ್ತವ ಸ್ಥಿತಿಯ ಬಗ್ಗೆ ವೈಜ್ಞಾನಿಕವಾಗಿ ಮನುವರಿಕೆ ಮಾಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲರಾಗಿದ್ದಾರೆಂದು ದೂರಿದರು.

ಕೂಡಲೇ ಉಳಿದ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಸರ್ಕಾರ (ಎನ್.ಡಿ.ಆರ್.ಎಫ್) ಮತ್ತು ರಾಜ್ಯ ಸರ್ಕಾರ (ಎಸ್.ಡಿ.ಆರ್.ಎಫ್) ಅನುದಾನದಡಿದಲ್ಲಿ ಪ್ರತಿ ಎಕರೆಗೆ ಒಣ ಬೇಸಾಯಕ್ಕೆ 25-30 ಸಾವಿರ ಮತ್ತು ನೀರಾವರಿ ಪ್ರದೇಶಕ್ಕೆ ಎಕರೆಗೆ 45-50 ಸಾವಿರ ರೂಪಾಯಿಯಂತೆ ಕೂಡಲೇ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯನ್ನು ಶೀಘ್ರವೇ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡದೇ ಇದ್ದಲ್ಲಿ ದಿನಾಂಕ: 15-09-2026 ರಂದು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಬೃಹತ್‌ ಮಟ್ಟದ ಪ್ರತಿಭಟನೆ ಮಾಡಲಾಗುವುದೇದೆಂದು ಸರ್ಕಾರಕ್ಕೆ ಎಚ್ಚರಿಸಿದರು,

ಈ ಸಂಧರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕೂಯಿಲೂರ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಅಶೋಕ ನಾಯಕ, ಸುಭಾಷ ಯರಗೋಳ, ವೆಂಕಟರಾಮುಲು ಸೈದಾಪೂರ, ಸುರೇಶ ಬೆಳಗುಂದಿ, ಜರ್ನಾಧನ ಬಡಿಗೇರಾ, ಮಹೇಶ ಠಾಣಗುಂದಿ, ಸೈದಪ್ಪ ಬಾಂಬೆ, ನಾಗಪ್ಪ ಗೋಪಾಳಪೂರ ಸೇರಿ ಅನೇಕ ಕರವೇ ಕಾರ್ಯಕರ್ತರರು ಹಾಗೂ ರೈತರು ಭಾಗಿಯಗಿದ್ದರು.