ರೇಷ್ಮೆ ಬೆಳೆ ಇಲ್ಲದೇ ಇರುವ ರೈತರಿಂದ ಹಣ ಪಡೆದು ಸಹಾಯಧನ ಕೊಡುತ್ತಿದ್ದಾರೆ. ದುಡ್ಡು ಕೊಡದೆ ಪ್ರಶ್ನಿಸಿದ ನಮ್ಮ ಫೈಲ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ಫೈಲ್‌ಗಳನ್ನು ರೈತರು ಪ್ರದರ್ಶಿಸಿದರು.

ಶಿರಹಟ್ಟಿ: ರೇಷ್ಮೆ ಇಲಾಖೆಯ ಡಿಡಿ ರೈತರಿಂದ ಲಂಚ ಪಡೆದು ಸರ್ಕಾರದ ಸಹಾಯಧನ ನೀಡುತ್ತಿದ್ದು, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ರೈತರಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾವಣೆ ಇಲ್ಲವೆ ಅಮಾನತು ಮಾಡಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.ಸ್ಥಳೀಯ ರೇಷ್ಮೆ ಇಲಾಖೆಯ ಕಚೇರಿಯ ಆವರಣದಲ್ಲಿ ಸೋಮವಾರ ಧರಣಿ ಕೈಗೊಂಡ ರೈತರು ರೇಷ್ಮೆ ಇಲಾಖೆಯ ಡಿಡಿ ಕೈಲಾಸ ಮೂರ್ತಿ ಅವರ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ರೈತರು ಮಾತನಾಡಿ, ಸರ್ಕಾರದಿಂದ ರೈತರಿಗೆ ನೀಡಲಾಗುತ್ತಿರುವ ರೇಷ್ಮೆ ಸಸಿ ನಾಟಿಯ ಸಹಾಯಧನವನ್ನು ಎರಡೂ ತಾಲೂಕಿನ ರೈತರಿಗೆ ನೀಡುತ್ತಿಲ್ಲ. ರೇಷ್ಮೆ ಬೆಳೆ ಇಲ್ಲದೇ ಇರುವ ರೈತರಿಂದ ಹಣ ಪಡೆದು ಸಹಾಯಧನ ಕೊಡುತ್ತಿದ್ದಾರೆ. ದುಡ್ಡು ಕೊಡದೆ ಪ್ರಶ್ನಿಸಿದ ನಮ್ಮ ಫೈಲ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ಫೈಲ್‌ಗಳನ್ನು ಪ್ರದರ್ಶಿಸಿದರು.

ಹಣ ಕೊಡದೇ ಪ್ರಶ್ನಿಸಿದ ರೈತರಿಗೆ ನೇರವಾಗಿ ನಮ್ಮ ಮೇಲಧಿಕಾರಿಗಳಿಗೆ, ಜಿಲ್ಲೆಯ ಸಚಿವರಿಗೆ, ಶಾಸಕರಿಗೆ ನಾವು ಹಣ ಕೊಡಬೇಕು ಎಂದು ಹೇಳುತ್ತಿದ್ದು, ನಿತ್ಯ ರೈತರನ್ನು ಸತಾಯಿಸುತ್ತಿದ್ದಾರೆ. ಅವರು ಹಣ ಪಡೆದ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ರೈತರಿಗೆ ಕಳೆದ ನಾಲ್ಕೈದು ವರ್ಷಗಳಿಂದ ನಾಟಿ ವೆಚ್ಚ ಹಾಗೂ ಚಾಕಿ ವೆಚ್ಚ ನೀಡದೇ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಈ ಹಿಂದೆ ಈ ಅನ್ಯಾಯದ ಕುರಿತು ಪ್ರತಿಭಟನೆ ಕೈಗೊಂಡಾಗ ಅಧಿಕಾರಿಗಳ ಭರವಸೆಗೆ ಹಿಂತೆಗೆದುಕೊಳ್ಳಲಾಗಿತ್ತು. ಸದ್ಯ ಈ ಡಿಡಿ ಅವರ ಬೇಜವಾಬ್ದಾರಿಂದ ಮತ್ತೆ ಅದನ್ನೇ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಲ್ಲಿ ಗುಂಪುಗಾರಿಕೆ ಹುಟ್ಟು ಹಾಕಿ ತಾಲೂಕಿನ ರೈತರಲ್ಲಿಯೇ ಜಗಳ ತಂದಿಡುತ್ತಿದ್ದಾರೆ. ರೈತರಲ್ಲದ ಕೆಲ ವ್ಯಕ್ತಿಗಳನ್ನು ಮೇಲಧಿಕಾರಿಗ ಹತ್ತಿರ ಕರೆದೊಯ್ದು, ಅವರ ಪರವಾಗಿ ಮಾತನಾಡಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿದ್ದರೆ ರೈತರು ನಮ್ಮ ನಮ್ಮಲ್ಲಿಯೇ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು ಹಾಗೂ ಶಾಸಕರು ಕ್ರಮ ವಹಿಸಿ ಅವರನ್ನು ವರ್ಗಾಯಿಸಿ, ಎರಡೂ ತಾಲೂಕಿನ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನವನ್ನು ನೀಡಬೇಕೆಂದು ಒತ್ತಾಯಿಸಿದರು.

ರೈತರಾದ ಮಲ್ಲಿಕಾರ್ಜುನ ದೊಡ್ಡಮನಿ, ರವಿಸ್ವಾಮಿ ಚೆನ್ನಸಪುರಮಠ, ನಿಂಗಪ್ಪ ಮಲ್ಲೂರ, ಸಣ್ಣಹನುಮಪ್ಪ ತಿರಕಣ್ಣವರ, ಇಸ್ಮಾಯಿಲ್ ಢಾಲಾಯತ, ಚಂದ್ರು ಬಂಡಿ, ರವಿರೊಡ್ಡನವರ ಸೇರಿದಂತೆ ಮುಂತಾದವರು ಇದ್ದರು.