ಬಳ್ಳಾರಿ ನಗರದ ಎಸ್ಪಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಕೂಡಲೇ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು

ಬಳ್ಳಾರಿ: ನಗರದ ಎಸ್ಪಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಕೂಡಲೇ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪುತ್ಥಳಿ ಉದ್ಘಾಟನೆಗೆ ಸಿದ್ಧಗೊಂಡ ವೇಳೆಯಲ್ಲಿ ಉಂಟಾದ ಗೊಂದಲದಿಂದ ವಿಗ್ರಹ ಲೋಕಾರ್ಪಣೆ ಸಮಾರಂಭ ಮುಂದೂಡಲಾಗಿದೆ. ಪುತ್ಥಳಿ ಪ್ರತಿಷ್ಠಾಪನೆಗೊಳಿಸಿ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದು ಇಡೀ ಸಮಾಜಕ್ಕೆ ಅಪಮಾನದ ಸಂಗತಿಯಾಗಿದೆ. ಹೀಗಾಗಿ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಚರ್ಚಿಸಿ ಕೂಡಲೇ ಪುತ್ಥಳಿ ಅನಾವರಣಕ್ಕೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಅಖಂಡ ವಾಲ್ಮೀಕಿ ನಾಯಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮೋಕಾ ಮುದಿಮಲ್ಲಯ್ಯ , ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಹಾಕಿರುವ ಬಟ್ಟೆಯನ್ನು ಒಂದು ತಿಂಗಳೊಳಗೆ ತೆರವುಗೊಳಿಸಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಎಲ್ಲ ವಾಲ್ಮೀಕಿ ಸಮಾಜದ ಬಂಧುಗಳು ಆಗಮಿಸಿ ಬಟ್ಟೆಯನ್ನು ತೆರವುಗೊಳಿಸಿ, ನಾವೇ ಅನಾವರಣಗೊಳಿಸುತ್ತೇವೆ. ಇದಕ್ಕೆ ಆಸ್ಪದವಾಗದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕೀಲ ಬಿ. ಜಯರಾಮ್ ಮಾತನಾಡಿ, ಪುತ್ಥಳಿ ಸುತ್ತಲೂ ಕಟ್ಟಿರುವ ಬಟ್ಟೆಯು ಮಳೆ-ಗಾಳಿಗೆ ಕಿತ್ತು ಹೋಗುತ್ತಿದೆ. ಮತ್ತೆ ಬಟ್ಟೆ ಕಟ್ಟಲಾಗುತ್ತಿದೆ. ಇದು ಪದೇಪದೇ ನಡೆಯುತ್ತಿದೆ. ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪುತ್ಥಳಿಗೆ ಅನಾವರಣಕ್ಕೆ ಬೇಕಾದ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ತೆರಳಿದ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಿದರು.ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮನವಿ ಸ್ವೀಕರಿಸಿದರು. ಮುಖಂಡರಾದ ಜನಾರ್ದನ ನಾಯಕ, ಬಿ.ರುದ್ರಪ್ಪ, ಎನ್. ದುರುಗಪ್ಪ, ಕೆ.ಕೆ. ಹಾಳು ಸತ್ಯನಾರಾಯಣ (ಸತ್ಯಪ್ಪ), ಶ್ರೀನಾಥ್, ಟಿ.ಸುರೇಶ್, ಮೋಕಾ ಗೋವಿಂದಪ್ಪ, ಅಸುಂಡಿ ಹೊನ್ನೂರಸ್ವಾಮಿ, ರಂಗಯ್ಯ, ದೇಗಲಪಾಡು ನಾರಾಯಣಪ್ಪ, ಸಿಂದಿಗೇರಿ ಗೋವಿಂದಪ್ಪ, ಮೋಕಾ ರಂಗಯ್ಯ, ನಾಗರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.