ಕಾಯಂ ಶಿಕ್ಷಕರಿಗಾಗಿ ಪ್ರತಿಭಟನೆ

| Published : Jul 04 2024, 01:01 AM IST

ಸಾರಾಂಶ

ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಇದ್ದಾರೆ. ಈ ಶಾಲೆಯಲ್ಲಿ 4 ಮಂಜೂರಿ ಹುದ್ದೆ ಇದ್ದರೂ ಒಬ್ಬರೂ ಕಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿಲ್ಲ. ಕೇವಲ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದಾಗಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ.

ಜೋಯಿಡಾ: ತಾಲೂಕಿನ ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಬುಧವಾರ ವಿದ್ಯಾರ್ಥಿಗಳು ಹಾಗೂ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ಮನವಿ ಸ್ವೀಕರಿಸಿ, ಶಿಕ್ಷಕರನ್ನು ಕಾಯಂ ನಿಯೋಜನೆ ಮಾಡುವ ಬಗ್ಗೆ ಭರವಸೆ ನೀಡಿದಾಗ ಸ್ಥಳಿಯರು ತಾತ್ಕಾಲಿಕ ಧರಣಿ ಹಿಂದಕ್ಕೆ ಪಡೆದಿದ್ದಾರೆ.

ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಇದ್ದಾರೆ. ಈ ಶಾಲೆಯಲ್ಲಿ 4 ಮಂಜೂರಿ ಹುದ್ದೆ ಇದ್ದರೂ ಒಬ್ಬರೂ ಕಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿಲ್ಲ. ಕೇವಲ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದಾಗಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ. ಕನಿಷ್ಠ ಒಬ್ಬರಾದರೂ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿದರು.

ಬೆಳಗ್ಗೆ 10 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಸೇರಿದ ಪಾಲಕರು ಮತ್ತು ವಿದ್ಯಾರ್ಥಿಗಳು ಶಿಕ್ಷಕರು ಬೇಕೆ ಬೇಕು ಎಂದು ಘೋಷಣೆ ಕೂಗಿದರು. ಪ್ರತಿಭಟನೆ ಮುಂದುವರಿಸಿದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸಿದರು.

ಅವುರ್ಲಿ ಶಾಲೆಗೆ ಕಾಯಂ ಅಥವಾ ಡೆಪ್ಯೂಟೇಶನ್ ಮೇಲೆ ಶಿಕ್ಷಕರನ್ನು ಇಲಾಖೆ ನೇಮಿಸದಿದ್ದರೆ ಶಾಲೆ ಎದುರು ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರಾಘವೇಂದ್ರ ನಾಯ್ಕ, ಏಕನಾಥ ನಾಯ್ಕ, ಗಣೇಶ ವೇಳಿಪ, ರಾಮಚಂದ್ರ ಮರಾಠೆ, ರವಿ ರೆಡಕರ, ಶ್ರೀಕಾಂತ್ ಮಿರಾಶಿ, ಮಿನಾಕ್ಷಿ ದೇಸಾಯಿ, ಗಜಾನನ ದೇವಿದಾಸ, ಬಾಲಚಂದ್ರ ವೇಳಿಪ, ಗಜಾನನ ವೇಳಿಪ, ರಮ್ಯಾ ನಾಯ್ಕ, ಪ್ರೀತಿನಂದ ಶೇಟಕರ, ರಾಜು ವೇಳಿಪ, ದೀಪಾ ದೇಸಾಯಿ ಕಿರಣ್ ಶೇಟಕರ, ವಾಮನ ದೇವಿದಾಸ, ನಿತೇಶ್ ಸಾವಂತ್ ಮತ್ತಿತರರು ಇದ್ದರು.