ಚನ್ನಗಿರಿ ಪುರಸಭೆ ಆಡಳಿತ ಅವ್ಯವಸ್ಥೆ ಸುಧಾರಿಸದಿದ್ದರೆ ಪ್ರತಿಭಟನೆ

| Published : Sep 12 2024, 01:51 AM IST

ಚನ್ನಗಿರಿ ಪುರಸಭೆ ಆಡಳಿತ ಅವ್ಯವಸ್ಥೆ ಸುಧಾರಿಸದಿದ್ದರೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆಗಳು ಜನರಿಗೆ ಬಾಧಿಸುತ್ತಿವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸದಸ್ಯರು ಬುಧವಾರ ಪುರಸಭೆಗೆ ಬಂದಿದ್ದಾರೆ. ಆಗ ಮುಖ್ಯಾಧಿಕಾರಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಯಾರು ಇರಲಿಲ್ಲ. ಇದರಿಂದಾಗಿ ಸದಸ್ಯರು ಪುರಸಭೆ ಆಡಳಿತ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ವಾರ್ಡ್‌ಗಳಲ್ಲಿನ ಸಮಸ್ಯೆಗಳ ಪರಿಹಾರ ಬಗ್ಗೆಯೂ ಚರ್ಚೆ ನಡೆಸಿದರು.

- ಕಚೇರಿಯಲ್ಲಿ ಅಧಿಕಾರಿಗಳೇ ಇರೋದಿಲ್ಲ: ಸದಸ್ಯರ ಆರೋಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆಗಳು ಜನರಿಗೆ ಬಾಧಿಸುತ್ತಿವೆ. ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸದಸ್ಯರು ಬುಧವಾರ ಪುರಸಭೆಗೆ ಬಂದಿದ್ದಾರೆ. ಆಗ ಮುಖ್ಯಾಧಿಕಾರಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲೀ ಯಾರು ಇರಲಿಲ್ಲ. ಇದರಿಂದಾಗಿ ಸದಸ್ಯರು ಪುರಸಭೆ ಆಡಳಿತ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ವಾರ್ಡ್‌ಗಳಲ್ಲಿನ ಸಮಸ್ಯೆಗಳ ಪರಿಹಾರ ಬಗ್ಗೆಯೂ ಚರ್ಚೆ ನಡೆಸಿದರು.

ಪಟ್ಟಣದಲ್ಲಿ ಬಿಡಾಡಿ ದನಗಳು, ಹುಚ್ಚುನಾಯಿ, ಬೀದಿನಾಯಿಗಳ ಹಾವಳಿ, ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜು, ಬಸ್ ನಿಲ್ದಾಣದ ಶಿಥಿಲ ಛಾವಣಿಗಳು, ವಾಕಿಂಗ್ ಪಾತ್‌ನಲ್ಲಿ ಕಳೆ ಗಿಡಗಳು ಮುಂತಾದ ಸಮಸ್ಯೆಗಳು ಚರ್ಚೆಗೆ ಬಂದದವು. ಅಲ್ಲದೇ, ಪಟ್ಟಣ ಸ್ವಚ್ಚತೆ ಮತ್ತು 2022ರಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಲ್ಯಾಪ್ ಟಾಪ್‌ಗಳ ವಿತರಣೆ ವಿಳಂಬ, ಹಂದಿಗಳ ಹಾವಳಿ ಮುಂತಾದ ಸಮಸ್ಯೆಗಳು ಪರಿಹಾರ ಕಂಡಿಲ್ಲ.

ಜನರಿಗೇ ಏನು ಉತ್ತರಿಸಬೇಕು?:

ಈ ಎಲ್ಲ ಸಮಸ್ಯೆಗಳ ಬಗ್ಗೆ ವಿಚಾರಿಸಲೆಂದೇ ಸದಸ್ಯರಾದ ಪಟ್ಲಿ ನಾಗರಾಜ್, ಪಾರಿ ಪರಮೇಶ್, ಸವಿತಾ ರಾಘವೇಂದ್ರ, ಕಮಲಾ ಹರೀಶ್, ಲಕ್ಷ್ಮೀದೇವಮ್ಮ ಅವರು ಪುರಸಭಾ ಕಚೇರಿಗೆ ಬಂದಿದ್ದರು. ಆದರೆ, ತಂತಮ್ಮ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸೂಕ್ತ ಸ್ಪಂದನೆ ಕೊಡುತ್ತಿಲ್ಲ,. ಅಧಿಕಾರಿಗಳನ್ನು ಭೇಟಿ ಮಾಡಲು ಕಚೇರಿಗೆ ಬಂದರೆ ಅಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಇರುವುದಿಲ್ಲ. ವಾರ್ಡ್ ಸದಸ್ಯರಾಗಿ ನಮ್ಮ ನಾಗರೀಕರಿಗೆ ನಾವು ಏನು ಉತ್ತರ ನೀಡಬೇಕು ಎಂದು ಕಿಡಿಕಾರಿದರು.

ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಪ್ರಥಮ ಅವಧಿ ಮುಕ್ತಾಯಗೊಂಡಿದ್ದು, 2ನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದೆ. ಆದರೂ, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಹೀಗಾದರೆ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಎಂದು ಸದಸ್ಯರು ಅಧಿಕಾರಿಗಳ ಕರ್ತವ್ಯಪ್ರಜ್ಞೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕರೆ ಸ್ವೀಕರಿಸೋದಿಲ್ಲ:

ಪುರಸಭೆಗೆ ಆಡಳಿತ ಆಧಿಕಾರಿಗಳು ನೇಮಕಗೊಂಡು 8-9 ತಿಂಗಳು ಕಳೆಯುತ್ತಿದೆ. ಆದರೂ, ಇದುವರೆಗೂ ಆಡಳಿತಾಧಿಕಾರಿಗಳು ಪಟ್ಟಣದ ಅಭಿವೃದ್ಧಿ ಕುರಿತಂತೆ ಮತ್ತು ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಸಭೆ ನಡೆಸಿಲ್ಲ. ಸದಸ್ಯರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸದಸ್ಯರ ಅಧಿಕಾರವನ್ನು ಅಧಿಕಾರಿಗಳು ಮೊಟಕುಗೊಳಿಸುತ್ತಿದ್ದಾರೆ ಎಂದು ದೂರಿದರು.

ಅಧಿಕಾರಿಗಳ ನಿರ್ಲಕ್ಷ್ಯ, ದುರಾಡಳಿತ ಇದೇ ರೀತಿ ಮುಂದುವರಿದರೆ ನಮ್ಮ ನಾಯಕ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪುರಸಭೆ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು ಎಂದು ಸದಸ್ಯ ಪಟ್ಲಿ ನಾಗರಾಜ್ ಹೇಳಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಕಮಲಾಹರೀಶ್, ಪಾರಿಪರಮೇಶ್, ಸವಿತಾರಾಘವೇಂದ್ರ, ಲಕ್ಷ್ಮಿದೇವಮ್ಮ ಹಾಜರಿದ್ದರು.

- - - -11ಕೆಸಿಎನ್‌ಜಿ1:

ಚನ್ನಗಿರಿ ಪಟ್ಟಣದ ಪುರಸಭಾ ಕಚೇರಿ ಆಡಳಿತ ಕುಸಿತ ಬಗ್ಗೆ ಸದಸ್ಯರು ಚರ್ಚೆ ನಡೆಸಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ, ಅಸಮಾಧಾನ ವ್ಯಕ್ತಪಡಿಸಿದರು.