ಸಾರಾಂಶ
ಹುಬ್ಬಳ್ಳಿ:
ಗುತ್ತಿಗೆ ಪದ್ಧತಿ ರದ್ಧತಿ. ನೇರ ವೇತನ ಪಾವತಿ ಸೇರಿದಂತೆ ಮತ್ತಿತರರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯೂ 2ನೆಯ ದಿನಕ್ಕೆ ಕಾಲಿಟ್ಟಿದೆ. ಮಳೆ, ಚಳಿ ಲೆಕ್ಕಿಸದೇ ಹಗಲು-ರಾತ್ರಿ ಧರಣಿ ಮುಂದುವರಿಸಿದ್ದು, ಶುಕ್ರವಾರ ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದು ವಿಶೇಷ. ಆದರೆ ಪಾಲಿಕೆ ಆಯುಕ್ತರು ಈವರೆಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.2017ರಲ್ಲೇ ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲವೇ ನೇರ ವೇತನ ಪಾವತಿ ಮಾಡಬೇಕು ಎಂದು ಆದೇಶಿಸಿದೆ. ಆದರೆ ಈವರೆಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾತ್ರ ನೇರ ವೇತನ ಪಾವತಿ ಜಾರಿಗೆ ತರುತ್ತಿಲ್ಲ. ಮೈಸೂರು ಪಾಲಿಕೆಯಲ್ಲಿ ನೇರ ವೇತನ ಪಾವತಿ ಮಾಡಿ ಆದೇಶಿಸಿದೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಮಾಡಬೇಕು ಎಂದು ಆಗ್ರಹ ಪೌರಕಾರ್ಮಿಕರದ್ದು.
2017ರಿಂದ ಈವರೆಗೆ 200 ಪೌರಕಾರ್ಮಿಕರು ಮೃತಪಟ್ಟಿದ್ದಾರೆ. 100ಕ್ಕೂ ಅಧಿಕ ಪೌರಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಹೀಗಾಗಿ 300 ಜನ ಪೌರಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೆ ಪಾಲಿಕೆ ಮಾತ್ರ ಕ್ರಮಕೈಗೊಳ್ಳುತ್ತಿಲ್ಲ. ಪಾಲಿಕೆಯೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಪೌರಕಾರ್ಮಿಕರ ಮೇಲೆ ಅಮಾನವೀಯ ಶೋಷಣೆ, ವಂಚನೆ ನಡೆದಿದೆ. ಈ ಬಗ್ಗೆ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದರು.ಪೌರಕಾರ್ಮಿಕರ ಹಕ್ಕೊತಾಯಗಳನ್ನು ಸರ್ಕಾರ ಮತ್ತು ಪಾಲಿಕೆ ಈಡೇರಿಸಬೇಕು. ತಪ್ಪಿದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನೀಲವ್ವ ಬೆಳವಟಗಿ, ಪಾರವ್ವ ಹೊಸಮನಿ, ರಾಧಾ ಬಾಗಲಾಡ, ರಾಜು ನಾಗರಾಳ, ಪರಶುರಾಮ ಕಡಕೋಳ, ಕನಕಪ್ಪ ಕೊಟಬಾಗಿ, ಮದನ್ ಬೀಳಗಿ, ನಾಗೇಶ ಚುರಮುರಿ, ಸೋಮು ಮೊರಬದ, ರೇಣುಕಾ ಬಳ್ಳಾರಿ, ಶರಣಪ್ಪ ಅಮರಾವತಿ, ನಾಗರಾಜ ದೊಡ್ಡಮನಿ ಸೇರಿದಂತೆ ಹಲವರಿದ್ದರು.