ಆಲಂಬೂರು ಏತ ನೀರಾವರಿ ಯೋಜನೆಯ 2ನೇ ಹಂತದ ಕೆರೆಗಳಿಗೆ ನೀರು ತುಂಬಿಸದಿರುವುದನ್ನು ಖಂಡಿಸಿ ವಿವಿಧ ಗ್ರಾಮಗಳ ರೈತರು ತಾಲೂಕಿನ ಮರಿಯಾಲ ಗ್ರಾಮದ ಬಳಿ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.

ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರ ಹೋರಾಟ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆಲಂಬೂರು ಏತ ನೀರಾವರಿ ಯೋಜನೆಯ 2ನೇ ಹಂತದ ಕೆರೆಗಳಿಗೆ ನೀರು ತುಂಬಿಸದಿರುವುದನ್ನು ಖಂಡಿಸಿ ವಿವಿಧ ಗ್ರಾಮಗಳ ರೈತರು ತಾಲೂಕಿನ ಮರಿಯಾಲ ಗ್ರಾಮದ ಬಳಿ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.

ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಗೇಟ್‌ ಬ‍ಳಿ ನಂಜದೇವನಪುರ, ಕಾಳನಹುಂಡಿ, ಬೇಡರಪುರ ಶಿವಗಂಗೆ ಹಾಗೂ ಮಾಲಗೆರೆ ಕೆರೆ ವ್ಯಾಪ್ತಿಯ ರೈತರು ಬೆಳಗ್ಗೆ 10 ಗಂಟೆಗೆ ಸಮಾವೇಶಗೊಂಡು ರಸ್ತೆಯ ಒಂದು ಬಳಿ ಕುಳಿತು ಪ್ರತಿಭಟನೆ ಪ್ರಾರಂಭಿಸಿದರು.

ಮಧ್ಯಾಹ್ನ 1 ಗಂಟೆಯಾದರೂ ಅಧಿಕಾರಿಗಳು ಸಮಸ್ಯೆ ಕೇಳಲು ಆಗಮಿಸದ ಹಿನ್ನಲೆ ರಸ್ತೆ ಮದ್ಯದಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯಿಂದ ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರು ಮಾತನಾಡಿ, ಆಲಂಬೂರು ಏತ ನೀರಾವರಿ ಯೋಜನೆಯ ಎರಡನೇಯ ಹಂತದ ನಂಜದೇವನಪುರ, ಕಾಳನಹುಂಡಿ, ಶಿವಗಂಗೆ ಹಾಗೂ ಮಾಲಗೆರ ಕೆರೆಗಳಿಗೆ ಕಳೆದ 2 ವರ್ಷಗಳಿಂದ ನೀರು ಹರಿಸಿಲ್ಲದಿದ್ದರಿಂದ ಈ ಭಾಗದ ರೈತರು ನ್ಯಾಯಸಮ್ಮತ ಬೇಡಿಕೆಯಿಟ್ಟು ಬೃಹತ್ ರಸ್ತೆ ತಡೆ ಚಳುವಳಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

2ನೇ ಹಂತದ ಎಲ್ಲಾ ಕೆರೆಗಳಿಗೆ ತಕ್ಷಣ ನೀರುಹರಿಸಬೇಕು, ಆಲಂಬೂರು ಏತ ನೀರಾವರಿ ಯೇಜನೆಯ 4 ಹಂತಗಳಿಗೂ ಪ್ರತ್ಯೇಕ ಹಾಗೂ ಸ್ಪಷ್ಟವಾದ ನೀರು ಹರಿಸುವ ವೇಳಾಪಟ್ಟಿಯನ್ನು ಸಿದ್ದಪಡಿಸಬೇಕು. ಸಿದ್ಧಪಡಿಸಿದ ವೇಳಾಪಟ್ಟಿಯಂತೆ ನಾಲ್ಕೂ ಹಂತಗಳ ಕೆರೆಗಳಿಗೆ ನೀರು ಹರಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಯಾವುದೇ ಹಂತದ ಕೆರೆಗಳಿಗೆ ತಾರತಮ್ಯ ಮಾಡದೇ ವೇಳಾಪಟ್ಟಿಯ ಪ್ರಕಾರ ನೀರು ಹರಿಸುವ ವ್ಯವಸ್ಥೆಯನ್ನು ಖಚಿತಪಡಿಸಬೇಕು, ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿ ನೀರು ಹರಿಸುವ ಕುರಿತು ಸ್ಪಷ್ಠ ಭರವಸೆ ನೀಡಬೇಕು ಎಂದು ಮನವಿ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಎಡಿಸಿ ಜವರೇಗೌಡ ಸ್ಥಳಕ್ಕಾಗಮಿಸಿ ಮನವೊಲಿಸಲೆತ್ನಿಸಿದರೂ ಮಣಿಯದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಬರುವ ತನಕ ಮುಂದುವರೆಸುವುದಾಗಿ ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರೂಪಾ ಅವರು, 15 ದಿನಗಳ ಕಾಲಾವಕಾಶವನ್ನು ಕೋರಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಬುಲೆಟ್‌ ಮಹೇಶ್‌, ರೈತ ಮುಖಂಡರಾದ ಕಾಡಹಳ್ಳಿ ಚಿನ್ನಸ್ವಾಮಿ, ಕೆ.ಪಿ. ವೀರಭದ್ರಸ್ವಾಮಿ, ಮರಿಯಾಲ ಗ್ರಾಮದ ಪ್ರಮೇದ್, ಶಂಕರ್‌ ಬೇಡರಪುರ ಗ್ರಾಮದ ಬಸವಣ್ಣ, ಗಿರೀಶ್‌, ರವಿ, ಕಾಳನಹುಂಡಿ ಗ್ರಾಮದ ಪುಟ್ಟಣ್ಣ, ಮಲ್ಲೇಶ್‌, ಮಹೇಶ್‌, ಮಾಲಗೆರೆ ಲೋಕೇಶ್‌ ಸೇರಿದಂತೆ ಮರಿಯಾಲ, ಕಾಳನಹುಂಡಿ, ಬೇಡರಪುರ, ನಂಜದೇವನಪುರ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

---

11ಸಿಎಚ್‌ಎನ್‌51ಪ್ರತಿಭಟನಾನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ, ಸಮಸ್ಯೆ ಆಲಿಸಿದರು.