ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಷ್ಟ್ರೀಯ ಶಿಕ್ಷಣ ಸಮಿತಿಯು ತಮ್ಮ ಸ್ವಾಧೀನದಲ್ಲಿರುವ ಕೆಲವು ಕಾಲೇಜಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ಕೈಬಿಡಲು ಅಗ್ರಹಿಸಿ ಎನ್.ಎಸ್.ಯು.ಐ. ನೇತೃತ್ವದಲ್ಲಿ ಶುಕ್ರವಾರ ನಗರದ ಎಟಿಎನ್ಸಿಸಿ ಕಾಲೇಜಿನ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಮತ್ತು ಇನ್ನಿತರೆ ಕಾಲೇಜುಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಎ.ಟಿ.ಎನ್.ಸಿ.ಸಿ. ಕಾಲೇಜು ಶಿವಮೊಗ್ಗದ ಪ್ರತಿಷ್ಠಿತ ವಾಣಿಜ್ಯ ಕಾಲೇಜಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಜೀವನ ರೂಪಿಸಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಅಡಿಯಲ್ಲಿ ಸ್ಥಾಪಿಸಿರುವ ಕಾಲೇಜಿಗೆ ಸರ್ಕಾರದಿಂದ ಬಹುತೇಕ ಉಚಿತ ನಿವೇಶನ, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿರುವುದರ ಜೊತೆಗೆ ಸರ್ಕಾರದ ಅನುದಾನ ನೀಡಿ, ಬೋಧಕ-ಬೋಧಕೇತರ ಸಿಬ್ಬಂದಿಗೆ ವೇತನ ಮತ್ತಿತರೆ ಸೌಲಭ್ಯಗಳನ್ನು ಸರ್ಕಾರವೇ ನೀಡುತ್ತಾ ಬರುತ್ತಿದೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಡಿಮೆ ಶುಲ್ಕದಲ್ಲಿ ವಾಣಿಜ್ಯ ಶಿಕ್ಷಣವನ್ನು ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಎ.ಟಿ.ಎನ್.ಸಿ. ಕಾಲೇಜು ಮತ್ತು ಇನ್ನಿತರೆ ಕಾಲೇಜುಗಳನ್ನು ಅನುದಾನರಹಿತ ಖಾಸಗೀ ಕಾಲೇಜು ಎಂದು ಮಾರ್ಪಡಿಸುವಂತೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೇ ಈ ಕಾಲೇಜಿನಲ್ಲಿ ಸರ್ಕಾರದ ವೇತನ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಪೂರ್ಣಾವಧಿ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಬೇರೆ ಬೇರೆ ಕಾಲೇಜುಗಳಿಗೆ ನಿಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ ಎಂದು ಆಪಾದಿಸಿದರು.ದಿವಂಗತ ಎಸ್.ಆರ್. ನಾಗಪ್ಪಶ್ರೇಷ್ಠಿ ಹಾಗೂ ಗಿರಿಮಾಜಿ ರಾಜಗೋಪಾಲ್ರವರಂತಹ ಹಿರಿಯರ ನೇತೃತ್ವದಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಯು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಲಿ ಎಂಬ ಮಹದುದ್ದೇಶದಿಂದ ಎನ್.ಇ.ಎಸ್. ಸಂಸ್ಥೆಯನ್ನು ಸ್ಥಾಪಿಸಿ ಈ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲು ನಾಂದಿ ಹಾಡಿದ್ದರು. ಆದರೇ ಈಗ ಎನ್.ಇ.ಎಸ್. ಸಂಸ್ಥೆ ಶಿಕ್ಷಣ ವ್ಯಾಪಾರೀಕರಣಕ್ಕೆ ಇಳಿದಿರುವುದು ದುರ್ದೈವವಾಗಿದೆ ಎಂದು ಟೀಕಿಸಿದರು.
ಸರಿಸುಮಾರು ಅರ್ಧ ಶತಮಾನಗಳಷ್ಟು ಹಳೆಯದಾದ ಕಾಲೇಜುಗಳು ಇಷ್ಟು ವರ್ಷ ಸರ್ಕಾರದಿಂದ ಅನುದಾನ ಪಡೆದು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದು, ಇದೀಗ ಕೇವಲ ದುಡ್ಡುಮಾಡುವ ದುರುದ್ದೇಶದಿಂದ ಈ ಕಾಲೇಜುಗಳನ್ನು ಖಾಸಗೀಕರಣ ಮಾಡುವುದು ಎಷ್ಟರಮಟ್ಟಿಗೆ ಸರಿ ? ಕೂಡಲೇ ರಾಷ್ಟ್ರೀಯ ಶಿಕ್ಷಣ ಸಮಿತಿ ಈ ಪ್ರಯತ್ನವನ್ನು ಕೈಬಿಟ್ಟು ಹಿಂದಿನಂತೆ ಅನುದಾನಿತ ಕಾಲೇಜಾಗಿ ಮುಂದುವರೆಸಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ತೀವ್ರ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷ ವಿಜಯಕುಮಾರ್, ಕಾರ್ಯಾಧ್ಯಕ್ಷ ರವಿಕುಮಾರ್. ನಗರಾಧ್ಯಕ್ಷರಾದ ರವಿಕುಮಾರ್, ಪದಾಧಿಕಾರಿಗಳಾದ ಚಂದ್ರೋಜಿ ರಾವ್,ವರುಣ್, ಆದಿತ್ಯ, ಸುಭಾನ್, ಪರಾಜ್, ಆಕಾಶ್, ಲೋಹಿತ್, ಸೃಜನ್, ಪ್ರೀತಂ, ಕುಮಾರಸ್ವಾಮಿ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.