ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದ ಯಾವ ಮೂಲೆಯಲ್ಲೆ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರತಿಭಟಿಸುತ್ತೇವೆ, ಕೇಸ್ ಮಾಡದೆ ಹೋದರೆ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.ಕಾಂಗ್ರೆಸ್ ಹಿಂದು ವಿರೋಧಿ, ಕಳೆದ 3 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ನೂರಾರು ಹಿಂದು ವಿರೋಧಿ ಕೆಲಸಗಳೇ ಆಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಕಲಬುರಗಿ ಘಟಕ ಸೋಮವಾರ ಮಿನಿ ವಿಧಾನಸೌಧ ಕಚೇರಿ ಎದುರು ರಾಜ್ಯದ ಕಾಂಗ್ರೆಸ್ ಸರ್ಕಾರವು ಆಳಂದ ನಗರದ ಲಾಡ್ಲೇ ಮಶಾಕ್, ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಅಡ್ಡಿಪಡಿಸಿದವರ ಮೇಲಿನ ಕೇಸ್ ವಾಪಸ್ ಪಡೆದಿರುವುದರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಈಚೆಗೆ ದಕ್ಷಿಣ ಕನ್ನಡದಲ್ಲಿ ಮಧ್ಯರಾತ್ರಿ ಹಿಂದು ಕಾರ್ಯಕರ್ತನ ಮನೆಗೆ ಹೋಗಿ ಪೊಲೀಸರು ಫೋಟೋ ತೆಗೆದು ವಶಕ್ಕೆ ಪಡೆದಿದ್ದಾರೆ, ಇಂತಹ ಹಲವು ಘಟನೆಗಳಾಗುತ್ತಿವೆ. ಇವನ್ನೆಲ್ಲ ನೋಡಿ ಸುಮ್ಮನಿರೋದಿಲ್ಲ. ರಾಜ್ಯಾದ್ಯಂತ ಎಲ್ಲೇ ಇಂತಹ ಘಟನೆಗಳಾದರೂ ತಕ್ಷಣ ಪ್ರತಿಭಟಿಸುವಂತೆ ಬಿಜೆಪಿ ಜಿಲ್ಲಾ ಘಟಕಗಳಿಗೆ ಕರೆ ನೀಡಿದ ವಿಜಯೇಂದ್ರ, ಕೇಸ್ ದಾಖಲಿಸಲು ಹಿಂದೆ ಮುಂದೆ ಪೊಲೀಸರು ನೋಡಿದರೆ ಠಾಣೆಗೂ ಮುತ್ತಿಗೆ ಹಾಕುವಂತೆ ಕರೆ ನೀಡಿದರು.
2028ರಲ್ಲಿ ಬಿಜೆಪಿಯೇ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ, ಬಿಜೆಪಿ ಸರ್ಕಾರ ರಚನೆಯಾದ 24 ಗಂಟೆಯೊಳಗೆ ಎಲ್ಲಾ ಹಿಂದು ಕಾರ್ಯಕರ್ತರ ಮೇಲೆ ಹಾಕಲಾಗಿರುವ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಕೇಸ್ಗಳನ್ನು ವಾಪಸ್ ಪಡೆಯುತ್ತೇವೆಂದು ಘೋಷಿಸಿದರು.
ಆಳಂದ ಲಾಡ್ಲೆ ಮಶಾಕ್ ದರ್ಗಾ, ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿವಾದ, ಗಲಭೆಯ ಕೇಸ್ಗಳನ್ನು ಸರ್ಕಾರ ವಾಪಸ್ ಪಡೆದುದರ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಯಲಿದೆ. ಕೋರ್ಟ್ ಮೆಟ್ಟಿಲು ಹತ್ತಿ ನ್ಯಾಯ ಕೋರುತ್ತೇವೆ. ಕಲಬುರಗಿಗೆ ಬಂದು ಗಿಮಿಕ್ ಮಾಡೋದಲ್ಲ, ಇದು ನಮ್ಮ ಪ್ರಾಮಾಣಿಕ ಹೋರಾಟ ಅನ್ನೋದನ್ನು ಯಾರೂ ಮರೆಯಬಾರದು ಎಂದು ವಿಜಯೇಂದ್ರ ಹೇಳಿದರು.
ಆಳಂದದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜಿಸಲು ತೆರಳುತ್ತಿದ್ದ ಹಿಂದುಗಳ ಮೇಲೆ ಮುಸ್ಲಿಂ ಸಮುದಾಯದ ಗೂಂಡಾಗಳು ದಾಳಿ ನಡೆಸಿದ್ದನ್ನು ಅಲ್ಲಿನ ಶಾಸಕ ಬಿ.ಆರ್.ಪಾಟೀಲ್ ಖಂಡಿಸಬೇಕಿತ್ತು, ಅದನ್ನು ಬಿಟ್ಟು ಯು.ಟಿ.ಖಾದರ್ ಪತ್ರ ಮುಂದೆ ಮಾಡಿ ಗೂಂಡಾಗಳ ಮೇಲಿನ ಕೇಸ್ ವಾಪಸ್ ಮಾಡಿಸಿದ್ದಾರೆ. ಇಂತಹವರು ಹಿಂದುಗಳು ಎನ್ನಲಾದೀತೆ? ಹಿಂದುಗಳು ಇನ್ನಾದರೂ ಎಚ್ಚರವಾಗಬೇಕು, ಹಿಂದುಗಳಿಗೆ ಎಲ್ಲೇ ಸಂಕಷ್ಟ ಎದುರಾದರೂ ಬಿಜೆಪಿಯ ರಾಜ್ಯ, ಜಿಲ್ಲಾ ಮುಖಂಡರು, ಹಾಲಿ, ಮಾಜಿ ಶಾಸಕರು ಅಲ್ಲಿ ಧಾವಿಸುತ್ತೇವೆ, ನೊಂದ ಹಿಂದುಗಳ ನೆರವಿಗೆ ನಿಲ್ಲುತ್ತೇವೆಂದು ಹೇಳಿದರು.