ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಹಲಗೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾ ಶಂಕರ ಮಾತನಾಡಿ, ವಾಹನಗಳ, ಗೃಹ ಸಾಲ ಮತ್ತು ವಾಣಿಜ್ಯ ವ್ಯಾಪಾರಗಳ ಸಾಲವನ್ನು ನೀಡಿ ನಂತರ ಸಾಲ ಸುಸ್ತಿ ಆದ ನಂತರ ಬಡ್ಡಿ, ಚಕ್ರ ಬಡ್ಡಿಗಳನ್ನು ವಿಧಿಸಿ ಅನೇಕ ವಿಧದ ದುಪ್ಪಟ್ಟು ಶುಲ್ಕಗಳನ್ನು ಹಾಕಿ ಸಾಲ ಪಡೆದ ಗ್ರಾಹಕರ ಮನೆಗಳ ಬಳಿ ತೆರಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಪಡೆದವರ ಮೇಲೆ ನ್ಯಾಯಾಲಯಕ್ಕೆ ದಾವೆ ಹೂಡಿ ಮನೆ ಹರಾಜು ಪ್ರಕ್ರಿಯೆ ಸಾಕಷ್ಟು ನಡೆಯುತ್ತಿವೆ. ಸಂಕಷ್ಟಕ್ಕೆ ಸಿಲುಕಿದ ನಂತರ ಅದೆಷ್ಟೋ ಕುಟುಂಬಗಳು ಮಾನಕ್ಕೆ ಹೆದರಿ ಗ್ರಾಮಗಳನ್ನು ತ್ಯಜಿಸುತ್ತಿವೆ. ಆದ್ದರಿಂದ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ರಾಷ್ಟ್ರೀಕೃತ ಬ್ಯಾಂಕ್ಗಳು ರೈತ ಪಡೆದ ಕೃಷಿ ಸಾಲ ವಾಪಸ್ ನೀಡುವಂತೆ ಸಾಲ ಪಡೆದ ರೈತನ ಮನೆಗಳ ಬಳಿ ಬ್ಯಾಂಕ್ನ ಅಧಿಕಾರಿಗಳು ಹೋಗಿ ಬೆದರಿಸಿ ಕಿರುಕುಳ ನೀಡುತ್ತಿವೆ. ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ ರೈತರನ್ನು ಕೋರ್ಟಿಗೆ ಅಲೆಸುವುದಲ್ಲದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ರೈತ ಮುಖಂಡ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ ಮಾತನಾಡಿ, ರೈತ ಸಂಜೀವಿನಿ ಹೆಸರಿನಲ್ಲಿ ಕೃಷಿ ಚಟುವಟಿಕೆ ನಡೆಸುವಾಗ ಅವಘಡಗಳು ಸಂಭವಿಸಿದಾಗ ಸರ್ಕಾರ 1 ಲಕ್ಷ ರು. ಪರಿಹಾರದ ರೂಪದಲ್ಲಿ ಘೋಷಿಸಿತ್ತು. ಸರ್ಕಾರ ಕೂಡಲೇ 5 ಲಕ್ಷ ರು. ಪರಿಹಾರದ ಹಣ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೆ.ಜಿ.ಉಮೇಶ್, ಮಲ್ಲೇಶ್, ಪುಟ್ಟಸ್ವಾಮಿ, ಬಿಳಿಯಪ್ಪ, ತಮ್ಮಯ್ಯ, ಮರಲಿಂಗು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಕಾರ್ಯದರ್ಶಿ ಗಗನಗೌಡ, ಗೌರವಾಧ್ಯಕ್ಷ ಪಟೇಲ್ ಹರೀಶ್, ಎಸ್. ಎಲ್ .ಉಮೇಶ್, ವಿ. ಪಿ. ವರದರಾಜು ಸೇರಿದಂತೆ ಉಭಯ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.