ವಿದೇಶಕ್ಕೂ ಕೆಎಂಎಫ್ ಉತ್ಪನ್ನ ರಫ್ತು ಹೆಮ್ಮೆ: ಯಶ್ಪಾಲ್‌

| Published : Jan 22 2024, 02:15 AM IST

ಸಾರಾಂಶ

ಭಾನುವಾರ ಉಪ್ಪೂರಿನ ಉಡುಪಿ ಡೈರಿಯಲ್ಲಿ, ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಉಡುಪಿ ಡೈರಿ ಆಡಳಿತ ಕಚೇರಿ ಶಂಕು ಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಕೆಎಂಎಫ್‌ ಮೂಲಕ ಹಾಲಿನ ಬೂತ್ ಗಳನ್ನು ತೆರೆಯುವ ಮೂಲಕ ಬಹಳಷ್ಟು ಜನರಿಗೆ ಉದ್ಯೋಗವನ್ನು ನೀಡಿ ಹಲವು ಕುಟುಂಬಗಳಿಗೆ ಕೆ.ಎಂಎಫ್ ಆಧಾರವಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘ ಸಮಾಜಕ್ಕೆ ಆರೋಗ್ಯಕರ ಹಾಗೂ ಪ್ರಾಮಾಣಿಕ ಕೊಡುಗೆ ನೀಡುತ್ತಿದ್ದು, ದೇಶ ಮಾತ್ರವಲ್ಲದೆ ವಿದೇಶಗಳಿಗೂ ಕೆ.ಎಂ.ಎಫ್.ನ ಉತ್ಪನ್ನಗಳು ರವಾನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಯಶ್ ಪಾಲ್ ಎ. ಸುವರ್ಣ ಹೇಳಿದ್ದಾರೆ.

ಭಾನುವಾರ ಇಲ್ಲಿನ ಉಪ್ಪೂರಿನ ಉಡುಪಿ ಡೈರಿಯಲ್ಲಿ, ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಉಡುಪಿ ಡೈರಿ ಆಡಳಿತ ಕಚೇರಿ ಶಂಕು ಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಹಾಲಿನ ಬೂತ್ ಗಳನ್ನು ತೆರೆಯುವ ಮೂಲಕ ಬಹಳಷ್ಟು ಜನರಿಗೆ ಉದ್ಯೋಗವನ್ನು ನೀಡಿ ಹಲವು ಕುಟುಂಬಗಳಿಗೆ ಕೆ.ಎಂಎಫ್ ಆಧಾರವಾಗಿದೆ. ಮುಂದೆ ಜಿಲ್ಲೆಯಲ್ಲಿ ಉದ್ಯಮವನ್ನು ಇನ್ನಷ್ಟು ವಿಸ್ತರಿಸುದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

ರಾಜ್ಯದ 15 ಒಕ್ಕೂಟಗಳಲ್ಲಿ ಮಂಗಳೂರು ಕೆ.ಎಂ.ಎಫ್.ಗೆ 4 ನೇ ಸ್ಥಾನದಲ್ಲಿದೆ. ಲಾಭದ ಶೇ.15 ರಷ್ಟು ಮಾತ್ರ ಆಡಳಿತ ವೆಚ್ಚಕ್ಕಾಗಿ ಬಳಸಿಕೊಳ್ಳುತ್ತಿದ್ದು, ಶೇ.85 ರಷ್ಟು ಮೊತ್ತವನ್ನು ನೇರವಾಗಿ ಸೊಸೈಟಿ ಹಾಗೂ ಹೈನುಗಾರಿಕೆಗೆ ನೀಡುವ ಮೂಲಕ ರೈತರ ಮೊಗದಲ್ಲಿ ನಗುವನ್ನು ಕಾಣುವ ಕಾರ್ಯವನ್ನು ಕೆ.ಎಂ.ಎಫ್ ಮಾಡಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಮಾಜಿ ಶಾಸಕ ರಘುಪತಿ ಭಟ್, ಉಪ್ಪೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಒಕ್ಕೂಟದ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ರವಿರಾಜ ಹೆಗ್ಡೆ, ಕಾಪು ದಿವಾಕರ್ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನರಸಿಂಹ ಕಾಮತ್, ಬಿ ಸುಧಾಕರ್ ರೈ, ಸುಧಾಕರ್ ಶೆಟ್ಟಿ, ಸವಿತಾ ಎನ್ ಶೆಟ್ಟಿ, ಸ್ಮಿತಾ ಆರ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಎನ್ ಹಾಗೂ ಮತ್ತಿತರರು ಇದ್ದರು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ರವಿರಾಜ ಹೆಗ್ಡೆ ಕೊಡವೂರು ವಂದಿಸಿದರು, ಉಪವ್ಯವಸ್ಥಾಪಕ ಸುಧಾಕರ ಶೆಟ್ಟಿ ನಿರೂಪಿಸಿದರು.