ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಬೇರೆ ಮಕ್ಕಳನ್ನು ನೋಡದೇ ತಮ್ಮ ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ, ಅಂದಾಗ ಮಾತ್ರ ಆತ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.ಇಲ್ಲಿನ ಬಿ.ಕೆ.ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜ್ಞಾನ, ವಾಣಿಜ್ಯ,ಕಲಾ ವಿಭಾಗ ಯಾವುದೇ ಶಿಕ್ಷಣ ಪಡೆಯಲ್ಲಿ ಅದರಲ್ಲಿ ಅದರದೇ ಆದ ಮಹತ್ವವಿದೆ. ಈ ನಿಟ್ಟಿನಲ್ಲಿ ಕೆಎಲ್ಇ ಸಂಸ್ಥೆ ಕೋವಿಡ್ ನಂತರ ಹಲವಾರು ವೈದ್ಯಕೀಯ ಶಿಕ್ಷಣದಲ್ಲಿ ಬೇಸಿಕ್ ಶಿಕ್ಷಣ ನೀಡುತ್ತಿದೆ ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಇಎ, ನೀಟ್, ಜೆಇಇ, ಸಿಎ, ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಬೇಕಾಗುವ ತರಬೇತಿಯನ್ನು ಧಾರವಾಡದ ಕೋಚಿಂಗ್ ಸಂಸ್ಥೆಯಾಗಿರುವ ಮೈಪಾಲ್ ಸೆಂಟರ್ ವತಿಯಿಂದ ಕೆಎಲ್ಇ ಸಂಸ್ಥೆಯ ಬಿ.ಕೆ.ಕಾಲೇಜಿನ ವಿದ್ಯಾರ್ಥಿಗಳಿಗೆ ಬೇಸಿಕ್ ಶಿಕ್ಷಣ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಅನುಕೂಲವಾಗುವ ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಕೆಎಲ್ಇ ಸಂಸ್ಥೆ ಮೂರು ವಿಶ್ವವಿದ್ಯಾಲಯ ಹೊಂದಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.ಐರೋಪ್ಯ ರಾಷ್ಟ್ರಗಳಲ್ಲಿ ಪಿಜಿಯೋತೆರಪಿ ಹಾಗೂ ನರ್ಸಿಂಗ್ ಶಿಕ್ಷಣ ಕಲಿತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಮಲೇಶಿಯಾ ಸರ್ಕಾರ ಅಲ್ಲಿನ ವಿದ್ಯಾರ್ಥಿಗಳನ್ನು ಭಾರತಕ್ಕೆ ಶಿಕ್ಷಣಕ್ಕಾಗಿ ಕಳಿಸುತ್ತಿದ್ದು, ಇದು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಎಂದರು.ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಮಾತನಾಡಿ, ಇಂದು ವಿದ್ಯಾಭ್ಯಾಸ ಅಧ್ಯಯನಕ್ಕೆ ತನ್ನದೇ ಮಹತ್ವ ಬಂದಿದ್ದು, ಪಾಲಕರು ತಮೆಲ್ಲ ಸುಖಗಳನ್ನು ತ್ಯಾಗಮಾಡಿ ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾಗಿದ್ದಾರೆ. ಆದರೆ, ಮಕ್ಕಳಿಗೆ ಕೂಡಾ ಜವಾವ್ದಾರಿಗಳಿವೆ. ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಪ್ರಬುದ್ಧ ಶಿಕ್ಷಣ ವ್ಯವಸ್ಥೆ ನೀಡಲು ಗುರುಗಳಿದ್ದಾರೆ. ಜೊತೆಗೆ ಕ್ಷಣಮಾತ್ರದಲ್ಲಿ ತಮಗೆ ಗೂಗಲ್ನಲ್ಲಿ ಮಾಹಿತಿ ಲಭ್ಯವಿದೆ. ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳಿಗೆ ಮೊಬೈಲ್ ನೀಡಿ. ಆದರೆ, ಅದರಿಂದ ಒಳ್ಳೆಯದನ್ನು ಮಾತ್ರ ಪಡೆದುಕೊಂಡು ಬೇಡವಾದುದಕ್ಕೆ ಬೆನ್ನು ಹತ್ತದೆ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ ಉತ್ತಮ ಗುರಿ, ಶಿಸ್ತು, ಛಲ, ಏಕಾಗ್ರತೆ, ವಿನಯತೆಯಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವೆಂದು ತಿಳಿಸಿದರು. ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪದವಿ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಸ್ವಾಗತಿಸಿದರು. ಪಿಯು ಕಾಲೇಜಿನ ಪ್ರಾಚಾರ್ಯ ಪಿ.ಪಿ.ಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಮಹೇಶ ಭಾತೆ, ಎನ್.ಎಸ್.ವಂಟಮುತ್ತೆ, ಮೈ ಪಾಲ್ ಕೋಚಿಂಗ್ ಸಂಸ್ಥೆಯ ವಿನಾಯಕ ಕುಲಕರ್ಣಿ ಉಪಸ್ಥಿತರಿದ್ದರು. ಮೋಹನ ಪಾಟೀಲ, ಪ್ರೀಯಾ ಖೋಂಬಾರೆ ನಿರೂಪಿಸಿದರು. ತಿಪ್ಪಣ್ಣ ಖೋತ ವಂದಿಸಿದರು.ಕೆಎಲ್ಇ ಸಂಸ್ಥೆಯು ಶಿಕ್ಷಣ,ಆರೋಗ್ಯ, ಕೃಷಿ, ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೋಸ್ಕರವೇ ಕೆಲಸ ಮಾಡುತ್ತಿದೆ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ಆಯ್ದುಕೊಂಡ ಗ್ರಾಮೀಣ ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧಾತ್ಮಕತೆಗೆ ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕೆಂಬ ಮಹಾದಾಸೆಯನ್ನು ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆಯವರದ್ದಾಗಿದೆ.
-ಮಹಾಂತೇಶ ಕವಟಗಿಮಠ, ಕೆಎಲ್ಇ ಸಂಸ್ಥೆಯ ನಿರ್ದೇಶಕರು.