ಸಾರಾಂಶ
ಪ್ರತಿ ಕುಟುಂಬಗಳ ಸಾಮಾಜಿಕ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಮಾಹಿಯನ್ನಾಧರಿಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.
ಹೊಸಪೇಟೆ: ರಾಜ್ಯಾದ್ಯಂತ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರಿಗೆ ಹೊಸಪೇಟೆ ನಿವಾಸಿಗಳು ತಮ್ಮ ಕೌಟುಂಬಿಕ ಸ್ಥಿತಿಗತಿಗಳ ವಾಸ್ತವ ಮಾಹಿತಿ ನೀಡಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಗ್ರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿ ಕುಟುಂಬಗಳ ಸಾಮಾಜಿಕ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಮಾಹಿಯನ್ನಾಧರಿಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಮೊಬೈಲ್ ಮೂಲಕ ಸಮೀಕ್ಷಾದಾರರು ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದರಿಂದ ಯಾವುದೇ ರೀತಿಯ ತಪ್ಪು ಗ್ರಹಿಕೆಗಳನ್ನು ವಹಿಸದೇ ತಮ್ಮ ಅಧಾರ ಕಾರ್ಡ್, ರೇಷನ್ ಕಾರ್ಡ್ ಹಾಗೂ ಚುನಾವಣಾ ಗುರುತಿನ ಚೀಟಿಗಳನ್ನು ತೋರಿಸಿ ಗಣತಿ ಕಾರ್ಯದಲ್ಲಿರುವ ಎಲ್ಲ ಪ್ರಶ್ನೆಗಳಿಗೆ ವಾಸ್ತವ ವರದಿಯನ್ನು ನೀಡಬೇಕು. ಇದರಿಂದ ನಿಮ್ಮ ಕೌಟುಂಬಿಕ ಸ್ಥಿತಿಗತಿಗಳನ್ನು ಸರ್ಕಾರ ಅರಿತು ಮುಂಬರುವ ಸರ್ಕಾರದ ಯೋಜನೆಗಳಿಗೆ ನೀವು ಫಲಾನುಭವಿಗಳಾಗಲು ಸಹಕಾರಿಯಾಗಲಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಜೆ.ಎಂ. ಅನ್ನದಾನಸ್ವಾಮಿ ಮಾತನಾಡಿ, ಸೆ.22ರಿಂದ ಅ.07 ರವರೆಗೆ 18 ದಿನಗಳ ಕಾಲ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಸರ್ಕಾರ 10 ವರ್ಷಗಳ ಹಿಂದೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಈಗೀನ ಕೌಟುಂಬಿಕ ಸ್ಥಿತಿಗತಿಗಳು ಅರಿಯುವ ನಿಟ್ಟಿನಲ್ಲಿ ಈ ಸಮೀಕ್ಷೆ ಕಾರ್ಯ ತುಂಬಾ ಅನುಕೂಲಕರವಾಗಲಿದೆ. ಪ್ರತಿಯೊಬ್ಬ ಸಮೀಕ್ಷಾದಾರರಿಗೆ ಕನಿಷ್ಠ 150 ಮನೆಗಳ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ಸ್ಥಳೀಯ ಪ್ರಾಥಾಮಿಕ ಶಾಲಾ ಶಿಕ್ಷಕರನ್ನು ಈ ಸಮೀಕ್ಷೆ ಕಾರ್ಯದಲ್ಲಿ ನಿಯೋಜಿಸಲಾಗಿದೆ. ಸಮೀಕ್ಷೆಯ ಪ್ರತಿಯಲ್ಲಿರುವ ಸುಮಾರು 60 ಪ್ರಶ್ನೆಗಳಿಗೆ ವೈಯಕ್ತಿಕ ಮತ್ತು ಕೌಟುಂಬಿಕ ಮಾಹಿತಿಯನ್ನು ತಂತ್ರಜ್ಞಾನ ಬಳಸಿ ಮೊಬೈಲ್ ನಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಜಿಲ್ಲಾದ್ಯಾಂತ ಅಂದಾಜು 3.30 ಲಕ್ಷ ಕುಟುಂಬಗಳಿವೆ ಎಂದು ಜೆಸ್ಕಾಂ ಆರ್.ಆರ್. ಸಂಖ್ಯೆ ಆಧರಿಸಿ ಪ್ರತಿ ಮನೆಗಳಿಗೆ ಸ್ಟಿಕರ್ ಅಂಟಿಸಲಾಗಿದೆ. ಅವುಗಳ ಅಧಾರದ ಮೇಲೆ ಗಣತಿದಾರರು ಸಮೀಕ್ಷೆಗಳನ್ನು ನಡೆಸಲಿದ್ದಾರೆ. ಮನೆಯ ಯಜಮಾನ ಸೇರಿ ಕುಟುಂಬದ ಎಲ್ಲಾ ಸದಸ್ಯರ ಅಗತ್ಯ ಮಾಹಿತಿಗಳನ್ನು ಪಡೆಯಲಾಗುವುದು. ಯಾವುದೇ ರೀತಿಯ ನಿಮ್ಮ ಪ್ರಶ್ನೆಗಳಿದ್ದರೆ ಸ್ಥಳದಲ್ಲಿಯೇ ಉತ್ತರಿಸಲಿದ್ದಾರೆ ಎಂದರು.ಕಾರ್ಯಾಗಾರದಲ್ಲಿ ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಶಿವಕುಮಾರ್ ಯರಗುಎಡಿ, ತಾಪಂ ಇಒ ಆಲಂಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ಹಾಗೂ ತಹಶೀಲ್ದಾರ ಎಂ.ಶೃತಿ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ಸ್ಥಳೀಯರು ಭಾಗವಹಿಸಿದ್ದರು.