ಸಾರಾಂಶ
ಬಿಟ್ಟುಬಿಡದೇ ಸುರಿದ ಮಳೆಯಿಂದ 50ನೇ ವಾರ್ಡ ಸೇರಿದಂತೆ ಬಹುತೇಕ ಸ್ಮಂಗಳು ಅಕ್ಷರ ನಲುಗಿವೆ. ಮನೆಗಳು ಕುಸಿದಿವೆ, ಮನೆಗಳಲ್ಲಿ ಕೊಳಚೆ ನೀರು ಹೊಕ್ಕಿದೆ, ನಾಲಾ ಪಕ್ಕದ ಮನೆಗಳ ಪರಿಸ್ಥಿತಿ ಹೇಳತೀರದಾಗಿದೆ.
ಹುಬ್ಬಳ್ಳಿ:
ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಅತಿಯಾಗಿ ಸುರಿದಿದ್ದರಿಂದ ಅವಳಿ ನಗರ ವ್ಯಾಪ್ತಿಯಲ್ಲಿನ ಸ್ಲಂ (ಕೊಳಚೆ ಪ್ರದೇಶ) ನಿವಾಸಿಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಹಾನಗರ ಪಾಲಿಕೆ ತಕ್ಷಣ ಅವರ ನೆರವಿಗೆ ದಾವಿಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ಆಗ್ರಹಿಸಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಟ್ಟುಬಿಡದೇ ಸುರಿದ ಮಳೆಯಿಂದ 50ನೇ ವಾರ್ಡ ಸೇರಿದಂತೆ ಬಹುತೇಕ ಸ್ಮಂಗಳು ಅಕ್ಷರ ನಲುಗಿವೆ. ಮನೆಗಳು ಕುಸಿದಿವೆ, ಮನೆಗಳಲ್ಲಿ ಕೊಳಚೆ ನೀರು ಹೊಕ್ಕಿದೆ, ನಾಲಾ ಪಕ್ಕದ ಮನೆಗಳ ಪರಿಸ್ಥಿತಿ ಹೇಳತೀರದಾಗಿದೆ. ತುಂಬಿ ಹರಿದ ಗಟಾರುಗಳಿಂದಾಗಿ ಎಲ್ಲೆಂದರಲ್ಲಿ ಕಸ ನಿಂತು ಇಡೀ ಪ್ರದೇಶ ಗಬ್ಬು ನಾರುತ್ತಿವೆ. ಎಲ್ಲೆಂದರಲ್ಲಿ ಭಾರೀ ಕಸ ಬೆಳೆದಿದೆ. ಇದರಿಂದ ದಿನದಿಂದ ದಿನಕ್ಕೆ ರೋಗರುಜಿನ ಹೆಚ್ಚುತ್ತಿವೆ. ಸ್ಲಂ ನಿವಾಸಿಗಳ ಬದುಕು ಉತ್ತಮ ಪಡಿಸಲು ಮಹಾನಗರ ಪಾಲಿಕೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲು ಸ್ವಚ್ಚತಾ ಕಾರ್ಯ ಆಗಬೇಕು. ಕುಸಿದ ಮತ್ತು ಕೊಳಚೆ ನೀರು ಹೊಕ್ಕ ಮನೆಗಳ ಸಮೀಕ್ಷೆಯಾಗಿ ಅಗತ್ಯ ನೆರವು ನೀಡಬೇಕು. ಫಾಗಿಂಗ್, ಡಿಡಿಟಿ ಪುಡಿ ಸಿಂಪರಣೆ ಆಗಬೇಕು. ಮನೆ ಮನೆಗೆ ಹೋಗಿ ಆರೋಗ್ಯ ಸೇವೆ ನೀಡಬೇಕು. ಕಿತ್ತುಹೋಗಿರುವ ರಸ್ತೆ, ನಿರುಪಯುಕ್ತವಾದ ಸಾರ್ವಜನಿಕ ಶೌಚಾಲಯ ರಿಪೇರಿ ಮಾಡಿಸಬೇಕು. ಎಷ್ಟೋ ಶಾಲೆಗಳೂ ಈ ಮಳೆಗೆ ನಲುಗಿವೆ. ಅಲ್ಲೂ ತಾತ್ಕಾಲಿಕ ರಿಪೇರಿ ಕಾರ್ಯ ಆಗಬೇಕು. ಈ ಸೇವೆಗಳ ಮೂಲಕ ಪಾಲಿಕೆ ಮತ್ತು ಸರ್ಕಾರ ನಿಮ್ಮೊಂದಿಗಿದೆ ಎನ್ನುವ ಭರವಸೆಯನ್ನು ಸ್ಲಂ ನಿವಾಸಿಗಳಿಗೆ ನೀಡುವುದು ಅಗತ್ಯವಿದೆ ಎಂದು ಪಾಲಿಕೆಯ ಆಯುಕ್ತರನ್ನು ಮೋಹನ ಹಿರೇಮನಿ ಆಗ್ರಹಿಸಿದ್ದಾರೆ.