ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ ಮಾಡಲು ಸ್ತ್ರೀ ಚೇತನ ಅಭಿಯಾನ ಕೂಡ ನಡೆಯಲಿದೆ.
ಉದ್ಯೋಗ ಚೀಟಿ ಪರಿಷ್ಕರಣೆ, ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ ಮಾಡಲು ಸ್ತ್ರೀ ಚೇತನ ಅಭಿಯಾನ ಕೂಡ ನಡೆಯಲಿದ್ದು, ಹೀಗಾಗಿ ಹೆಚ್ಚೆಚ್ಚು ಮಹಿಳೆಯರಿಗೆ ನರೇಗಾದಡಿ ಕೆಲಸ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ವೈ.ಎಚ್. ಚಂದ್ರಶೇಖರ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು.ಇಲ್ಲಿನ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯೋಗ ಚೀಟಿ ಪರಿಷ್ಕರಣೆ ಹಾಗೂ ಸ್ತ್ರೀಚೇತನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬಅರ್ಹ ಫಲಾನುಭವಿಗೆ ಜಾಬ್ಕಾರ್ಡ್ ವಿತರಿಸಿ, ಯೋಜನೆಯ ಎಲ್ಲ ಸೌಲಭ್ಯಗಳು ಅವರಿಗೆ ದೊರಕಬೇಕು. ಇದರಲ್ಲಿ ನರೇಗಾ ಸಿಬ್ಬಂದಿ ಶ್ರಮ ಸಾಕಷ್ಟು ಇರುತ್ತದೆ ಎಂದು ಅವರು ಹೇಳಿದರು.ನರೇಗಾ ಯೋಜನೆಯಡಿ ಈಗಾಗಲೇ ಅರ್ಹ ಕುಟುಂಬಗಳಿಗೆ ವಿತರಿಸಲಾದ ಉದ್ಯೋಗ ಚೀಟಿಗಳಲ್ಲಿ ಕೂಲಿಕಾರರ ಹೆಸರು, ವಯಸ್ಸು, ಕೆಟಗರಿ, ಬ್ಯಾಂಕ್ ಖಾತೆ ವಿವರ, ಆಧಾರ್ ಸಂಖ್ಯೆ, ಭಾವಚಿತ್ರ ಇತ್ಯಾದಿ ವಿವರಗಳನ್ನ ತಪ್ಪಾಗಿ ನಮೂದಿಸಿದ್ದರಿಂದ ಕೂಲಿಕಾರರಿಗೆ ಸಮರ್ಪಕವಾಗಿ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಕೆಲಸ ನೀಡಿದರೂ ಕೂಲಿ ಹಣ ಪಾವತಿಯಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ಈ ಏಪ್ರಿಲ್ ತಿಂಗಳಲ್ಲಿ ತಂತ್ರಾಂಶದಲ್ಲಿ ಸರಿಯಾದ ಮಾಹಿತಿ ದಾಖಲಿಸಲು ಅವಕಾಶ ಇದೆ. ಇದನ್ನು ಅತೀ ಶೀಘ್ರ ಮುಗಿಸಲು ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಎಚ್. ಮಾತನಾಡಿ, ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ವಿತರಿಸಲಾದ ಉದ್ಯೋಗ ಚೀಟಿಗಳ ಪಟ್ಟಿಯನ್ನು ಸಂಪೂರ್ಣ ವಿವರಗಳೊಂದಿಗೆ ಮುದ್ರಿಸಿಕೊಳ್ಳಬೇಕು. ಪ್ರತಿಯೊಂದು ಉದ್ಯೋಗ ಚೀಟಿಯಲ್ಲಿನ ಕುಟುಂಬ ಸದಸ್ಯರ ಹೆಸರು, ವಯಸ್ಸು, ಕೆಟಗರಿ (ಎಸ್ಸಿ, ಎಸ್ಟಿ, ಇತರೆ), ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇತ್ಯಾದಿ ವಿವರ ಪರಿಶೀಲಿಸಬೇಕು. ಪ್ರತಿಯೊಂದು ಉದ್ಯೋಗ ಚೀಟಿಯಲ್ಲಿನ ವಿವರವನ್ನು ನಿಖರವಾಗಿ ಅಪ್ಡೇಟ್ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ತಂಡಗಳ ರಚನೆ:
ಅಭಿಯಾನದ ಪ್ರಗತಿಯ ಮೇಲ್ವಿಚಾರಣೆ ಮಾಡಲು ವಿವಿಧ ಹಂತಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭ ಪಂಚಾಯತ್ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಎಂಐಎಸ್ ಸಂಯೋಜಕ ಮೈಲಾರಿಗೌಡ ಸೇರಿದಂತೆ ತಾಂತ್ರಿಕ ಸಹಾಯಕ ಅಭಿಯಂತರರು, ಬಿಎಫ್ಟಿಗಳು, ಗ್ರಾಮಕಾಯಕ ಮಿತ್ರರು, ತಾಂಡಾ ರೋಜಗಾರ್ ಮಿತ್ರರು ಇದ್ದರು.