ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 4 ಎಕರೆ 23 ಗುಂಟೆ ಜಮೀನು ಮಂಜೂರಾಗಿದೆ. ಸದರಿ ಕೃಷಿ ಮಾರುಕಟ್ಟೆಗೆ ಕಾಯಕಲ್ಪ ನೀಡಲು ₹7 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಸ್ಥಾಪನೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ‌. ವಿಶೇಷವಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳ ಸಂತೆ ನಡೆಸಲು ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು‌.

ತಾಲೂಕು ಕೇಂದ್ರವಾಗಿರುವ ಕೊಲ್ಹಾರ ಪಟ್ಟಣದಲ್ಲಿ ಕೃಷಿ ಮಾರುಕಟ್ಟೆಗೆ ಮೂಲಸೌಲಭ್ಯ‌ ಕಲ್ಪಿಸುವ ಕುರಿತು ಸೋಮವಾರ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕೃಷಿ ಮಾರುಕಟ್ಟೆ ಪ್ರದೇಶದಲ್ಲಿ ಮೂಲಸೌಲಭ್ಯ ಸಹಿತ ಅಭಿವೃದ್ಧಿ ಮಾಡುವುದರಿಂದ ಕೊಲ್ಹಾರ ಪಟ್ಟಣ ಅಭಿವೃದ್ಧಿ ಆಗಲಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಬಲವರ್ಧನೆಯಿಂದ ಪಟ್ಟಣ ಪಂಚಾಯಿತಿಗೂ ಆದಾಯ ಹೆಚ್ಚಲಿದೆ ಎಂದರು.

ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 4 ಎಕರೆ 23 ಗುಂಟೆ ಜಮೀನು ಮಂಜೂರಾಗಿದೆ. ಸದರಿ ಕೃಷಿ ಮಾರುಕಟ್ಟೆಗೆ ಕಾಯಕಲ್ಪ ನೀಡಲು ₹7 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಸಿಸಿ ರಸ್ತೆ ನಿರ್ಮಾಣ, ಕಾಂಪೌಂಡ್ ಗೋಡೆ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕುರಿತು ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಅಲ್ಲಾಭಕ್ಷ ಸೇರಿದಂತೆ ಎಇಇ ಎಲ್.ಬಿ.ಲಮಾಣಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕೊಲ್ಹಾರ ಕೃಷಿ ಮಾರುಕಟ್ಟೆ ಸಮಿತಿಗೆ ಸ್ಥಳ ಹಸ್ತಾಂತರವಾಗಿದೆ. ಪ್ರಾಂಗಣ ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಕಾರ್ಯಾದೇಶ ನೀಡಲಾಗಿದೆ‌ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳೀಯ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ತೂಕದ ಯಂತ್ರ ಸ್ಥಾಪನೆ ಆದ್ಯತೆಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಬ್ಬು ತೂಕದ ಯಂತ್ರ ಸ್ಥಾಪನೆ ಸ್ಥಳ ರಾಷ್ಟ್ರೀಯ ಹೆದ್ದಾರಿ ಪಕ್ಷದಲ್ಲಿ ಇರುವ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಏಕಮುಖ ಸಂಚಾರ ವ್ಯವಸ್ಥೆ ರೂಪಿಸುವಂತೆ ಸ್ಥಳದಲ್ಲಿದ್ದ ಪಿಎಸ್ಐ ಅಶೋಕ ನಾಯಕಗೆ ಸೂಚಿಸಿದರು.

ಕೊಲ್ಹಾರ ಪಪಂ ಅಧ್ಯಕ್ಷ ಸಿ.ಎಸ್.ಗಿಡ್ಡಪ್ಪಗೋಳ, ಸದಸ್ಯರಾದ ವಿಜಯಕುಮಾರ ಗಿಡ್ಡಪ್ಪಗೋಳ, ತೌಸಿಫ್ ಗಿರಗಾಂವಿ, ಶ್ರೀಶೈಲ ಮುಳವಾಡ (ಮಮದಾಪೂರ), ಕಂಕರಪೀರ, ದಸ್ತಗೀರ ಕಲಾದಗಿ, ಹನಿಪ್ ಮಕಾನದಾರ, ಎಂ.ಆರ್. ಕಲಾದಗಿ, ಮಹೇಶ್ ಗಿಡ್ಡಪ್ಪಗೊಳ, ಪ.ಪಂ. ಮುಖ್ಯಾಧಿಕಾರಿ ವಿರೇಶ ಹಟ್ಟಿ ಸೇರಿದಂತೆ ಇತರರಿದ್ದರು.