ಸಾರಾಂಶ
ಅಧಿಕಾರದ ಅವಧಿಯಲ್ಲಿ ಯಾರೊಬ್ಬರಿಗೂ ನೋವಾಗಂದತೆ ಗ್ರಾಮಗಳ ಹಿತ ಬಯಸಿ ಕಾರ್ಯ ಮಾಡಬೇಕು.
ಕನ್ನಡಪ್ರಭ ವಾರ್ತೆ ಕುಕನೂರು
ಜನರ ಮನೆ ಬಾಗಿಲಿಗೆ ಸೇವೆ ನೀಡಬೇಕು. ಯಾವೊಬ್ಬ ಫಲಾನುಭವಿಗಳು ಯೋಜನೆಯಿಂದ, ಸವಲತ್ತುಗಳಿಂದ ಹಿಂದುಳಿಯಬಾರದು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು.ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬನ್ನಿಕೊಪ್ಪಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ ಅವರು, ಬನ್ನಿಕೊಪ್ಪ ಗ್ರಾಪಂಗೆ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಅಧಿಕಾರದ ಅವಧಿಯಲ್ಲಿ ಯಾರೊಬ್ಬರಿಗೂ ನೋವಾಗಂದತೆ ಗ್ರಾಮಗಳ ಹಿತ ಬಯಸಿ ಕಾರ್ಯ ಮಾಡಬೇಕು. ಸದಾ ಜನರೊಂದಿಗೆ ಇದ್ದು ಅವರ ಕಷ್ಟಕ್ಕೆ ಸ್ಪಂದಿಸಬೇಕು. ಗ್ರಾಮಗಳ ಸ್ವಚ್ಛತೆಗೆ, ಕುಡಿವ ನೀರಿಗೆ, ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಗ್ರಾಮಗಳ ಅಭಿವೃದ್ಧಿ ಆದರೆ ರಾಷ್ಟ್ರಾಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಗ್ರಾಪಂ ಆಡಳಿತ ಮಂಡಳಿಯವರು ಗ್ರಾಮಗಳ ಸೇವೆಗೆ ಸಂಪೂರ್ಣ ತಮ್ಮನ್ನು ಅರ್ಪಣೆ ಮಾಡಿಕೊಳ್ಳಬೇಕು ಎಂದರು.ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕರೆಡ್ಡಿ ವೆಂಕಟಾಪುರ, ಉಪಾಧ್ಯಕ್ಷೆ ಹುಲಿಗೆಮ್ಮ ರಗಡಪ್ಪನವರ್ ಅವರಿಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಸನ್ಮಾನಿಸಿದರು.
ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಬನ್ನಿಕೊಪ್ಪ ಗ್ರಾಮದ ಪ್ರಮುಖರು, ಇತರರಿದ್ದರು.