ಸಾರಾಂಶ
ಸರ್ಕಾರಿ ಗುಂಡುತೋಪು ಜಾಗವನ್ನು ಸ್ಮಶಾನಕ್ಕೆ ಮೀಸಲಿರಿಸಿ ಭೂ ಮಂಜೂರಾತಿ ಮಾಡಬೇಕೆಂದು ಭ್ರಷ್ಟಾಚಾರ ಮುಕ್ತ ಹಾಗೂ ಮಾಹಿತಿ ಹಕ್ಕು ಜಾಗೃತಿ ವೇದಿಕೆ ಪದಾಧಿಕಾರಿಗಳು ಸೋಂಪುರ ನಾಡ ಕಚೇರಿಯ ಉಪ ತಹಸೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು.
ದಾಬಸ್ಪೇಟೆ: ಸರ್ಕಾರಿ ಗುಂಡುತೋಪು ಜಾಗವನ್ನು ಸ್ಮಶಾನಕ್ಕೆ ಮೀಸಲಿರಿಸಿ ಭೂ ಮಂಜೂರಾತಿ ಮಾಡಬೇಕೆಂದು ಭ್ರಷ್ಟಾಚಾರ ಮುಕ್ತ ಹಾಗೂ ಮಾಹಿತಿ ಹಕ್ಕು ಜಾಗೃತಿ ವೇದಿಕೆ ಪದಾಧಿಕಾರಿಗಳು ಸೋಂಪುರ ನಾಡ ಕಚೇರಿಯ ಉಪ ತಹಸೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಭ್ರಷ್ಟಾಚಾರ ಮುಕ್ತ ಹಾಗೂ ಮಾಹಿತಿ ಹಕ್ಕು ಜಾಗೃತಿ ವೇದಿಕೆ ಅಧ್ಯಕ್ಷ ಟಿ. ರವಿನಾಯ್ಕ್, ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದಲ್ಲಿ 970ಕ್ಕೂ ಹೆಚ್ಚು ಜನಸಂಖ್ಯೆಯಿದ್ದು ಸ್ಮಶಾನಕ್ಕೆ ಜಾಗವಿಲ್ಲದ ಹಿನ್ನೆಲೆಯಲ್ಲಿ ಕೆಂಗಲ್ ಗ್ರಾಮದ ಸರ್ವೆ ನಂ.8ರಲ್ಲಿನ ಸರ್ಕಾರಿ ಗುಂಡುತೋಪು ವಿಸ್ತೀರ್ಣ 0.19 ಗುಂಟೆ ಜಮೀನನ್ನು ಸ್ಮಶಾನಕ್ಕೆ ಮೀಸಲಿರಿಸಿ ಭೂ ಮಂಜೂರಾತಿ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.ಈಗಾಗಲೇ ಕೆಂಗಲ್ ಗ್ರಾಮದ ಸರ್ವೆನಂ 36ರಲ್ಲಿ 2 ಎಕರೆ 6 ಗುಂಟೆ ಜಾಗ ಸ್ಮಶಾನಕ್ಕೆ ಮೀಸಲಿಟ್ಟಿದ್ದು, ಈ ಜಾಗವೂ ಸಂಪೂರ್ಣ ಬಂಡೆಕಲ್ಲುಗಳಿಂದ ಕೂಡಿದೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಯೋಗ್ಯವಿಲ್ಲ. ಈ ಜಾಗದ ಬದಲಿಗೆ ಬೇರೆ ಜಾಗ ನೀಡಬೇಕೆಂದು ಆಗ್ರಹಿಸಿದರು.
ಗೋಮಾಳ ಜಾಗ ಕಬಳಿಸಲು ಹುನ್ನಾರ: ಸರ್ವೆ ನಂ. 8ರ ಪೈಕಿ 0.19 ಗುಂಟೆ ಸರ್ಕಾರಿ ಗುಂಡು ತೋಪು ಇರುವ ಹಿನ್ನೆಲೆಯಲ್ಲಿ ಕೆಲವು ಪಟ್ಟಭದ್ರರು, ಅನಧಿಕೃತ ವ್ಯಕ್ತಿಗಳು ಈ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದು, ಭೂ ಕಬಳಿಕೆಯಾಗದಂತೆ ತಡೆದು ಸಾರ್ವಜನಿಕ ಸ್ಮಶಾನ ಜಾಗವೆಂದು ಪರಿಗಣಿಸಿ ಈ ಜಾಗವನ್ನು ಮೀಸಲಿಡಲು ಕಾನೂನಾತ್ಮಕವಾಗಿ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.