ಆಟೋ ಕಾಂಪ್ಲೆಕ್ಸ್‌ನಲ್ಲಿ ವಿವಿಧ ಸೌಲಭ್ಯ ಕಲ್ಪಿಸಿ

| Published : Aug 05 2025, 12:30 AM IST

ಆಟೋ ಕಾಂಪ್ಲೆಕ್ಸ್‌ನಲ್ಲಿ ವಿವಿಧ ಸೌಲಭ್ಯ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆಟೋ ಕಾಂಪ್ಲೆಕ್ಸ್‌ನಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದಿಂದ ಸೋಮವಾರ ನಗರಕ್ಕಾಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ಆಟೋ ಕಾಂಪ್ಲೆಕ್ಸ್‌ನಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದಿಂದ ಸೋಮವಾರ ನಗರಕ್ಕಾಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಚಿನ್ನಪ್ಪ, 2002ರಲ್ಲಿ ಅಂದಿನ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅವರ ಮೂಲಕ ಆಗಿನ ಮುಖ್ಯಮಂತ್ರಿ ಬಂಗಾರಪ್ಪರವರ ಆದೇಶದ ಮೇರೆಗೆ ಕೆಐಎಡಿಬಿಯಿಂದ ಶಿವಮೊಗ್ಗ ನಗರದ ಗಾರ್ಡನ್ ಏರಿಯಾದಲ್ಲಿದ್ದ ಅಂದಿನ ಮಲೆನಾಡು ಭಾಗದ ಪ್ರಸಿದ್ಧ ವರ್ಕ್ ಶಾಪ್‌ಗಳು, ಆಟೋ ಮೊಬೈಲ್‌ಗಳು, ಗ್ಯಾರೇಜ್‌ಗಳನ್ನು ಆಟೋ ಕಾಂಪ್ಲೆಕ್ಸ್ ಆವರಣಕ್ಕೆ ಸ್ಥಳಾಂತರಿಸಲಾಯಿತು. ದ್ವಿಚಕ್ರ, ಕೃಷಿಗೆ ಸಂಬಂಧಪಟ್ಟ ಟ್ರ್ಯಾಕ್ಟರ್‌ಗಳು, ಟಿಲ್ಲರ್‌ಗಳು ಹಾಗೂ ಎಲ್ಲಾ ವಾಹನಗಳಿಗೂ ಸಂಬಂಧಪಟ್ಟಂತೆ ದುರಸ್ತಿಗೊಳಿಸುವ ಎಲ್ಲಾ ಸವಲತ್ತುಗಳು ಇದ್ದವು. ಇಲ್ಲಿಗೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ ಜಿಲ್ಲೆಗಳಿಂದ ಜನರು ತಮ್ಮ ವಾಹನಗಳ ದುರಸ್ತಿ (ರಿಪೇರಿ) ಗೆ ಬರುತ್ತಿದ್ದರು. ಇಲ್ಲಿ ದುಡಿಯುತ್ತಿದ್ದ ಎಲ್ಲರಿಗೂ ಅಡಿಗೆ ನೂರು ರು.ಗಳಂತೆ ಹೀಗಿರುವ ಆಟೋ ಕಾಂಪ್ಲೆಕ್ಸ್‌ನಲ್ಲಿ ಜಾಗ ನೀಡಿದ್ದರು ಎಂದು ತಿಳಿಸಿದರು.

ಆದಾದ ನಂತರ ಕೂಡ ವಿವಿಧ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಹಲವಾರುಬಾರಿ ಹೋರಾಟ ಮಾಡಿ ಮುಖ್ಯಮಂತ್ರಿ ಬಂಗಾರಪ್ಪನವರಿಗೆ 1 ಅಡಿಗೆ 50 ರು. ನೀಡಲು ಒತ್ತಾಯಿಸಿದ್ದೆವು. ಆಗ ಅವರು ಸ್ಪಂದಿಸಿ ಅಡಿಗೆ 50 ರು. ಗಳಿಗೆ ನಿಗದಿಪಡಿಸಿದ್ದರು. ಈ ರೀತಿಯಾಗಿ ಸುಮಾರು 252 ಮಳಿಗೆಗಳ ಮಾಲೀಕರಾಗಿ ಮುಂದುವರೆಸಿಕೊಂಡು ಬಂದಿದ್ದೇವೆ. ಜೊತೆಗೆ ಮಹಾನಗರ ಪಾಲಿಕೆಗೆ ತೆರಿಗೆಗಳನ್ನು ಕೂಡ ಪ್ರಾಮಾಣಿಕವಾಗಿ ಕಟ್ಟುತ್ತಿದ್ದೇವೆ. ಇತ್ತೀಚೆಗೆ ಪ್ರತಿ ವರ್ಷ 40 ರಿಂದ 50 ಲಕ್ಷ ರು. ತೆರಿಗೆ ಸಂಗ್ರಹವಾಗುತ್ತಿದೆ. ಇಷ್ಟಾದರೂ ಇದುವರೆಗೆ ಮಹಾನಗರ ಪಾಲಿಕೆಯು ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಬಿ.ಎಚ್.ರಸ್ತೆಯಿಂದ ನೇರ ಸಂಪರ್ಕ, ತ್ಯಾಜ್ಯ ವಿಲೇವಾರಿ ನಿರ್ವಹಣೆ, ಚರಂಡಿ ವ್ಯವಸ್ಥೆಗಳನ್ನು ಮಾಡಿಕೊಡಲು ಹಲವರಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ಕೂಡಲೇ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿ, ಸಮಸ್ಯೆಗಳನ್ನು ಬಗೆಹರಿಸಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಬರುವ ಜನಗಳಿಗೆ ವ್ಯವಸ್ಥಿತವಾಗಿ ಸುಸಜ್ಜಿತವಾದ ಆಟೋ ಕಾಂಪ್ಲೆಕ್ಸ್ ಅನ್ನು ಮೇಲ್ದರ್ಜೆಗೆ ಕೊಂಡೊಯ್ಯಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.ಕಾರ್ಯದರ್ಶಿ ರಂಗನಾಥ ಹಾಗೂ ಪದಾಧಿಕಾರಗಳಾದ ಪಿ. ವೆಂಟೇಶ್, ಮಾಲತೇಶ್ ಕೆ., ಇದಾಯತ್ ಖಾನ್ ವಿ., ವೆಂಕಟೇಶ್ ಪಿ., ಜಾನ್‌ಮೇಥಿ, ಜಾರ್ಜ್ ಹಾಗೂ ಅಂತೋಣಿ ಸೇರಿದಂತೆ ಇನ್ನಿತರ ಸದಸ್ಯರಿದ್ದರು.