ವೇತನ ಹೆಚ್ಚಳ, ಉದ್ಯೋಗ ಭದ್ರತೆ ಒದಗಿಸಿ

| Published : Dec 18 2024, 12:45 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಿ.ಎಂ ಪುಷ್ಪ ಮಾತನಾಡಿ, ಅಂಗನವಾಡಿ ನೌಕರರ ಹಲವು ಬೇಡಿಕೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಈವರೆಗೂ ಆಳುವ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನಬದ್ಧ ಕರ್ತವ್ಯಗಳಿವೆ. 2013ರ ಆಹಾರ ಭದ್ರತಾ ಕಾಯ್ದೆ 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಕಾರ್ಯಕರ್ತರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ ಎಂದರು. ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಕೋರ್ಟ್ ಇವರಿಂದ ಮೂರು ಮತ್ತು ನಾಲ್ಕನೇ ಗ್ರೆಡ್ ನೌಕರರಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದು ತೀರ್ಪು ನೀಡಿದೆ. ಸುಪ್ರೀಂಕೋರ್ಟ್ 1972ರ ಗ್ರಾಚುಟಿ ಕಾಯ್ದೆಯಡಿ ಅರ್ಹರೆಂದು ತೀರ್ಪು ನೀಡಿದೆ ಆದರೆ ಕರ್ನಾಟಕ ರಾಜ್ಯದಲ್ಲಿ ಈವರೆಗೂ ಇದು ಜಾರಿಯಾಗಿಲ್ಲ. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರನ್ನು ವರ್ಗ ಮೂರು ಮತ್ತು ನಾಲ್ಕು ಎಂದು ಪರಿಗಣಿಸಿ ಕಾಯಂಗೊಳಿಸಬೇಕು, ಕೂಡಲೇ ಗ್ರಾಚುಟಿ ಹಣವನ್ನು ಬಿಡುಗಡೆ ಮಾಡಿ ಎಲ್ಲರಿಗೂ ಅನ್ವಯಿಸುವಂತೆ ಕಾನೂನು ರೂಪಿಸಬೇಕು. ಕೇಂದ್ರ ಸರ್ಕಾರ ನಮ್ಮ ಗೌರವದರವನ್ನು ₹26,000ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತಿಯಾದವರಿಗೆ ಇಡಿ ಗಂಟು ಹಾಗೂ 10,000 ಮಾಸಿಕ ಪಿಂಚಣಿಯನ್ನು ನೀಡಬೇಕು. ಶಿಕ್ಷಣ ಇಲಾಖೆ ಎಸ್‌ಡಿಎಂಸಿ ಗಳಿಂದ ಪ್ರಾರಂಭ ಮಾಡಿರುವ ಎಲ್ಕೆಜಿ ಯುಕೆಜಿಯನ್ನು ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಜೊತೆಗೆ ಸಾಮೂಹಿಕ ಆರೋಗ್ಯ ವಿಮೆ ಕಲ್ಪಿಸಿ ನಮ್ಮ ಇನ್ನಿತರ ಬೇಡಿಕೆಗಳನ್ನು ಕೂಡ ಅತಿ ಶೀಘ್ರವಾಗಿ ಈಡೇರಿಸಬೇಕು ಎಂದು ಮನವಿ ಮಾಡಿದರು. ಸಿಐಟಿಯು ಜಿಲ್ಲಾದ್ಯಕ್ಷ ಧರ್ಮೇಶ್, ಸಂಘಟನೆ ಉಪಾಧ್ಯಕರುಗಳಾದ ಶಾರದ ,ಕಾಮಾಕ್ಷಿ ರಾಜು ,ಹೆಚ್.ಟಿ.ಮೀನಾಕ್ಷಿ ಕಾರ್ಯದರ್ಶಿಗಳಾದ ಟಿ.ಎಚ್. ಜಯಂತಿ , ,ಕೆಪಿ.ವೀಣಾ ,ಸುಮಿತ್ರಾ , ವಿಣಾ ಗೀತಾ ಜರೀನಾ ಹಾಗು ಬಿಕೆ.ಸಂಗೀತ ಇದ್ದರು.