ಪ್ರಾಂತ ಕೃಷಿ ಕೂಲಿಕಾರರಿಂದ ತಾಪಂ ಕಚೇರಿ ಮುತ್ತಿಗೆ, ಪ್ರತಿಭಟನೆ

| Published : May 23 2025, 12:44 AM IST

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಬೆಳಗ್ಗೆ ಸಂಜೆ ಎಂಎಸ್ ಎಸ್ ಪೋಟೋ ತೆಗೆಯುವ ವ್ಯವಸ್ಥೆ ರದ್ದು ಪಡಿಸಬೇಕು. ವರ್ಷಕ್ಕೆ 200 ಮಾನವ ದಿನ ಕೂಲಿ ಕೆಲಸ ನೀಡಬೇಕು. ದಿನಕ್ಕೆ ಕನಿಷ್ಠ 600 ರು. ಕೂಲಿ ನಿಗಧಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ತಾಪಂ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಬೆಳಗ್ಗೆ ಸಂಜೆ ಎಂಎಸ್ ಎಸ್ ಪೋಟೋ ತೆಗೆಯುವ ವ್ಯವಸ್ಥೆ ರದ್ದು ಪಡಿಸಬೇಕು. ವರ್ಷಕ್ಕೆ 200 ಮಾನವ ದಿನ ಕೂಲಿ ಕೆಲಸ ನೀಡಬೇಕು. ದಿನಕ್ಕೆ ಕನಿಷ್ಠ 600 ರು. ಕೂಲಿ ನಿಗಧಿ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ಪಿಡಿಒ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಜಾಬ್ ಕಾರ್ಡ್ ಮಾಡಿಕೊಡದೆ ಇಲ್ಲಸಲ್ಲದ ಸಬೂಬು ನೀಡಿ ತೊಂದರೆ ನೀಡುತ್ತಿದ್ದಾರೆ. ಜಾಬ್ ಇರುವ ಎಲ್ಲರಿಗೂ ನರೇಗಾ ಕೂಲಿ ಕೆಲಸ ನೀಡುತ್ತಿಲ್ಲ ಎಂದು ದೂರಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡಿ, ಈಗ ವರ್ಷಕ್ಕೆ 100 ದಿನ ಕೂಲಿ ನೀಡಲಾಗುತ್ತಿದೆ. 200 ದಿನ ನೀಡಬೇಕು. 600 ರು. ಕೂಲಿ ನಿಗಧಿ ಮಾಡಬೇಕು. ನಮೂನೆ 06 ರಲ್ಲಿ ಕೆಲಸ ಕೇಳಿರುವ ಎಲ್ಲ ಕೂಲಿಕಾರರಿಗೂ ಕೆಲಸ ನೀಡಬೇಕು. ನರೇಗಾ ಕೆಲಸ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಉದ್ಯೋಗ ಖಾತ್ರಿ ಸ್ಥಳದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಫೋಟೋ ತೆಗೆಯುವುದನ್ನು ಕೈಬಿಡಬೇಕು. ತಾಲೂಕಿನಂತೆ ನಡೆದಿರುವ ಭ್ರಷ್ಟಚಾರದ ತನಿಖೆ ಮಾಡಬೇಕು. ಕಿಕ್ಕೇರಿಯಲ್ಲಿ ವಾಸವಿರುವ ಬಡವರಿಗೆ ಹಕ್ಕುಪತ್ರ ನೀಡಬೇಕು. ಜನರಿಗೆ ಕುಡಿಯುವ ನೀರು ರಸ್ತೆ ಚರಂಡಿ ವಿದ್ಯುತ್ ದೀಪ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಗುಣಮಟ್ಟದ ಊಟ ಶೌಚಾಲಯ ನೀಡಬೇಕು. ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಸುಸಜ್ಜಿತ ಸ್ಮಶಾನ ನೀಡಬೇಕು ಎಂದು ತಾಪಂ ಇಒ ಕೆ.ಸುಷ್ಮಾ ಮನವಿ ಸಲ್ಲಿಸಿದರು.

ಸ್ಥಳದಲ್ಲಿಯೇ ಹಲವು ಪಿಡಿಒ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ ಜಾಬ್ ಕಾರ್ಡ್, ನರೇಗಾ ಕೂಲಿ ಕೆಲಸ ನೀಡುವುದಕ್ಕೆ ಆದೇಶ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎನ್.ಸುರೇಂದ್ರ, ತಾಲೂಕು ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋಪಾಲ್, ಜಯಮ್ಮ, ಲಕ್ಷ್ಮಮ್ಮ, ಶಾಂತಮ್ಮ, ಕೆಂಪಮ್ಮ, ರತ್ನಮ್ಮ ಸೇರಿದಂತೆ ಹಲವರು ಇದ್ದರು.