ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸದಸ್ಯರನ್ನು ಕೊಲ್ಲಬೇಕು ಎಂದು ಪ್ರಚೋದಿತ ಭಾಷಣ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿದ ಕಾರ್ಯಕರ್ತರು ಅಪರ ಪೊಲೀಸ್ ಅಧೀಕ್ಷಕ ಎಸ್.ಇ.ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಸಮಿತಿ ಆಲ್ ಇಂಡಿಯಾ ಆ್ಯಂಟಿ ಇಂಡಿಯಾ ಕಾಂಗ್ರೆಸ್ ಸಮಿತಿಯಾಗಿ ಪರಿವರ್ತನೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯವಾಗಿ ಅಪಾರ ಅನುಭವ ಪಡೆದವರು. ಭಗವಾನ್ ಬುದ್ಧರವರು ಜಗತ್ತನ್ನು ಪ್ರೀತಿಸಬೇಕು ಎಂಬ ಸಂದೇಶ ನೀಡಿದ್ದಾರೆ. ಅದನ್ನೇ ವಿರೋಧ ಮಾಡಿ ಮುಸ್ಲಿಮರು ನಮಾಜ್ ಮಾಡುವಾಗ ವಿಷ ಸರ್ಪ ಬಂದರೆ ಅದನ್ನು ಹೊಡೆದು ಕೊಲ್ಲುತ್ತಾರೆ. ಅದೇ ಮಾದರಿಯಲ್ಲಿ ವಿಷ ಸರ್ಪದಂತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಹೊಡೆದು ಕೊಲ್ಲಬೇಕು ಎಂದು ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡುವ ಮೂಲಕ ಎರಡೂ ಕೋಮಿನ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯವರನ್ನು ನಿಂದಿಸಿದರೆ ನಾನು ದೊಡ್ಡ ವ್ಯಕ್ತಿಯಾಗುತ್ತೇನೆಂಬ ಭ್ರಮೆಯಿಂದ ಈ ರೀತಿಯ ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಭಾರತೀಯರು ಅಮೆರಿಕಾದ ಗುಲಾಮರು ಎಂದು ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಹೇಳಿರುವುದನ್ನು ಖಂಡಿಸಿದ ಅವರು, ಹರಿಪ್ರಸಾದ್ ಅವರಿಗೆ ಗ್ರಾಪಂ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯವಿಲ್ಲ. ಇವರೇನಿದ್ದರೂ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕ ಗಾಂಧಿ ಅವರಿಗೆ ಜೈ ಎಂದು ಹೇಳಿಕೊಂಡೇ ರಾಜಕೀಯ ಮಾಡಿಕೊಂಡು ಬಂದವರು. ನೀವು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.


ಕೇಂದ್ರ ಸರ್ಕಾರ ಎಲ್ಲ ರಾಷ್ಟ್ರಗಳೊಂದಿಗೆ ಸಮನ್ವಯತೆ ಸಾಧಿಸಿರುವುದರಿಂದ ಹೋರ್ಮುಜ್ ಜಲಸಂದಿಯಲ್ಲಿ ನಮ್ಮ ರಾಷ್ಟ್ರದ ಹಡಗುಗಳು ಸರಾಗವಾಗಿ ಬರಲು ಸಾಧ್ಯವಾಗಿದೆ. ಗುಲಾಮಗಿರಿ ಸಂಸ್ಕೃತಿ ಏನಿದ್ದರೂ ಇಟಲಿ ಗುಲಾಮಗಿರಿ ಮಾಡುವವರಿಗೆ ಮಾತ್ರ ಎಂದು ಕಿಡಿಕಾರಿದರು.

ನಗರಾಧ್ಯಕ್ಷ ಪ್ರಸನ್ನಕುಮಾರ್, ಬಿ.ಕೃಷ್ಣ, ಎಸ್.ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಎಸ್.ನಾಗರಾಜು, ಚಂದ್ರು, ಮಹಂತಪ್ಪ, ಶಶಿಕುಮಾರ್, ನಿತ್ಯಾನಂದ, ಚನ್ನೇಗೌಡ ಇತರರು ಹಾಜರಿದ್ದರು.