ಸಾರಾಂಶ
ಟೇಕಲ್: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿಯ ಆದಿರಾಜಹಳ್ಳಿ ಗ್ರಾಮದ ಎ.ಆರ್.ನಾಗರಾಜ್ ಬೆಂಗಳೂರಿನ ಬ್ಯಾಟರಾಯನಪುರ ಸಂಚಾರಿ ಠಾಣೆಯ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರ ಠಾಣಾ ವ್ಯಾಪ್ತಿಯಲ್ಲಿ ಸಂಪ್ಗೆ ಬಿದ್ದಿದ್ದ ಮಗುವಿನ ಜೀವ ಉಳಿಸಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನಲ್ಲಿ ಮಾರ್ಚ್ 6 ರಂದು ಬುಧವಾರ ಮಧ್ಯಾಹ್ನ 3-30ರ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಪೋಲಿಸ್ ಠಾಣೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನ ಮನೆಯೊಂದರ ಬಳಿ ಹಲವು ಮಹಿಳೆಯರು ಗುಂಪು ಗೂಡಿದ್ದರು. ಸಂಪೊಳಗೆ ಬಿದ್ದ ಮಗುವನ್ನು ಕಾಪಾಡಿ ಎಂದು ಕೂಗುತ್ತಿರುವುದನ್ನು ನಾಗರಾಜ್ ಗಮನಿಸಿ, ತಕ್ಷಣ ಮಾಹಿತಿ ಪಡೆದು ತಾವು ಧರಿಸಿದ್ದ ಸಂಚಾರಿ ಠಾಣಾ ಡ್ರೆಸ್ನಲ್ಲಿಯೇ ಸಂಪ್ನೊಳಗೆ ಇಳಿದು ಆ ಮಗುವನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ. ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸಕಾಲಕ್ಕೆ ಮಗುವನ್ನು ಪ್ರಾಣಾಪಾಯದಿಂದ ಕಾಪಾಡಿದ ಸಂಚಾರಿ ಠಾಣಾ ಪಿಎಸ್ಐ ನಾಗರಾಜ್ ರ ಕಾರ್ಯಕ್ಕೆ ಸ್ಥಳೀಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.