ಸಮಸ್ಯೆ ಬಗೆಹರಿಸಲು ಸಮಗ್ರ ಇತಿಹಾಸ ಅರಿಯಬೇಕು: ಡಾ. ಮೇವಾ ಸಿಂಗ್ ಅಭಿಮತ

| Published : May 18 2024, 12:38 AM IST

ಸಮಸ್ಯೆ ಬಗೆಹರಿಸಲು ಸಮಗ್ರ ಇತಿಹಾಸ ಅರಿಯಬೇಕು: ಡಾ. ಮೇವಾ ಸಿಂಗ್ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಸಮಾಜದಲ್ಲಿ ಮನುಷ್ಯ ಬದುಕುತ್ತಿದ್ದರೂ ಮಾನಸಿಕ ಸಮಸ್ಯೆಗಳು ಹಾಗೆ ಇವೆ. ಕೋಪ, ತಾಪ, ಖಿನ್ನತೆಗಳನ್ನು ಎದುರಿಸುತ್ತಿದ್ದಾನೆ. ವ್ಯಕ್ತಿಯ ಸಂದರ್ಭಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆತನಿಗೆ ಸೂಕ್ತ ಪರಿಹಾರವನ್ನು ಮನೋವಿಜ್ಞಾನಿಗಳು ನೀಡಬೇಕಿದೆ

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಮನುಷ್ಯನ ಸಮಸ್ಯೆಗಳನ್ನು ಬಗೆಹರಿಸಲು ಮಾನವನ ಇತಿಹಾಸವನ್ನು ಸಮಗ್ರವಾಗಿ ಅರಿಯಬೇಕು ಎಂದು ಮೈಸೂರು ವಿವಿ ಮನಶಾಸ್ತ್ರ ವಿಭಾಗದ ಜೀವಮಾನದ ಪ್ರತಿಷ್ಠಿತ ಪ್ರಾಧ್ಯಾಪಕ ಹಾಗೂ ಮನೋವಿಜ್ಞಾನಿ ಡಾ. ಮೇವಾ ಸಿಂಗ್ ಸಲಹೆ ನೀಡಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ಮನಃಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ವಿಕಾಸಾತ್ಮಕ ಮನೋವಿಜ್ಞಾನ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾವಿರಾರು ವರ್ಷಗಳ ಪ್ರಕೃತಿಯ ಒಡನಾಟದಿಂದಾಗಿ ಮನುಷ್ಯನಿಗೆ ಸಹಜವಾಗಿ ವರ್ತಿಸುವ ಗುಣಗಳು ಬಂದಿರುತ್ತವೆ. ಸಮಸ್ಯೆಗಳನ್ನು ಬಗೆಹರಿಸುವ ಕಲೆಯೂ ಹುಟ್ಟಿನಿಂದಲೇ ಬಂದಿರುತ್ತದೆ. ಅನುಭವವು ಪರಿಸ್ಥಿತಿ ಎದುರಿಸುವ ಧೈರ್ಯವನ್ನು ನೀಡಿರುತ್ತದೆ ಎಂದರು.

ಆಧುನಿಕ ಸಮಾಜದಲ್ಲಿ ಮನುಷ್ಯ ಬದುಕುತ್ತಿದ್ದರೂ ಮಾನಸಿಕ ಸಮಸ್ಯೆಗಳು ಹಾಗೆ ಇವೆ. ಕೋಪ, ತಾಪ, ಖಿನ್ನತೆಗಳನ್ನು ಎದುರಿಸುತ್ತಿದ್ದಾನೆ. ವ್ಯಕ್ತಿಯ ಸಂದರ್ಭಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆತನಿಗೆ ಸೂಕ್ತ ಪರಿಹಾರವನ್ನು ಮನೋವಿಜ್ಞಾನಿಗಳು ನೀಡಬೇಕಿದೆ ಎಂದು ಅವರು ಹೇಳಿದರು.

ಅನುಭವದ ಆಧಾರದ ಮೇಲೆ ಮನುಷ್ಯನ ನಡವಳಿಕೆಗಳು ರೂಪುಗೊಂಡಿರುತ್ತವೆ. ಇವನ್ನು ವಿಕಸನಗೊಂಡ ಮಾನಸಿಕ ಕಾರ್ಯವಿಧಾನ (ಇಪಿಎಂ) ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಬುದ್ಧಿ, ವಿಷಯ ಗ್ರಹಿಕೆ, ವಿಶ್ಲೇಷಣೆ ಎಲ್ಲವನ್ನೂ ಇಪಿಎಂಗಳೇ ನಿರ್ಧರಿಸುತ್ತದೆ. ವ್ಯಕ್ತಿಯ ನಡವಳಿಕೆಗಳಿಗೆ ಇಪಿಎಂಗಳೇ ಆಧಾರ. ಇವು ವ್ಯಕ್ತಿಯಲ್ಲಿ ಬಹಳಷ್ಟಿರುತ್ತವೆ. ಸಂದರ್ಭ ಗ್ರಹಿಸಲು ನಿಖರತೆಯನ್ನು ತಂದುಕೊಡುತ್ತವೆ. ವರ್ತಿಸುವ ಸರಾಗತೆಯನ್ನು ಕೊಡುತ್ತವೆ. ಆಹಾರ ಸೂಸುವ ವಾಸನೆಯಿಂದಲೇ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮನಸ್ಸು ಗುರುತಿಸುವುದಿಲ್ಲವೇ? ಅದೇ ಇಪಿಎಂ ಎಂದು ಅವರು ವಿವರಿಸಿದರು.

ವಿಷವು ದೇಹಕ್ಕೆ ತಾಕದಿರುವುದಕ್ಕಾಗಿಯೇ ವ್ಯಕ್ತಿಯು ಹಾವು ನೋಡುತ್ತಿದ್ದಂತೆ ಹೆದರಿ ಪರಾರಿಯಾಗುತ್ತಾನೆ. ಈ ವರ್ತನೆಯೇ ಇಪಿಎಂ ಆಗಿದೆ. ಕ್ಯಾಲರಿ ಅವಶ್ಯತೆ ಇದ್ದಾಗ ಆಹಾರ ತಿನ್ನುವ ಆಸೆ ಹೆಚ್ಚಾಗುವುದು, ಜೀವನಮಟ್ಟ ಹಾಗೂ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸಂಪನ್ಮೂಲ ಸಂಗ್ರಹ ಮನೋಭಾವ ಮೂಡವುದು, ದೇಹದಲ್ಲಿ ಸೋಡಿಯಂ ಮಟ್ಟ ಕಾಯ್ದುಕೊಳ್ಳಲು ಉಪ್ಪು ಹಾಗೂ ಮಸಾಲೆ ತಿನ್ನುವ ಆಸೆ ಮೂಡುವುದೆಲ್ಲ ಮಾನಸಿಕ ಕಾರ್ಯ ವಿಧಾನವೇ ಆಗಿದೆ ಎಂದು ಅವರು ತಿಳಿಸಿದರು.

ಮನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಸಂಪತ್ ಕುಮಾರ್, ಮನಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಡಾ.ಎಚ್.ಕೆ. ಮಂಜು, ಇಂಚರಾ ಸಿ. ಸ್ವಾಮಿ ಇದ್ದರು.