ಸಾರಾಂಶ
ದೇಶದಲ್ಲಿ ಅನೇಕ ಮಹಾನ್ ಪುರುಷರು ಜನ್ಮ ತಾಳಿ ಜಾತೀ ಎಂಬ ಭೂತವನ್ನು ತೊಡೆದು ಹಾಕಲು ಪ್ರಯತ್ನ ಪಟ್ಟರೂ ಇಂದಿಗೂ ಜಾತಿ ವ್ಯವಸ್ಥೆ ನಮ್ಮಲ್ಲಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕಿದೆ ಆಗ ಮಾತ್ರ ನಾವು ಸುಭದ್ರವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಅಸ್ಪೃಶ್ಯತಾ ನಿವಾರಣೆ ಅಭಿಯಾನವನ್ನು ಹಳ್ಳಿಹಳ್ಳಿಯಲ್ಲಿ ಹಮ್ಮಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬೀದಿ ನಾಟಕಗಳು ಸಹಕಾರಿಯಾಗಿದೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಅಸ್ಪೃಶ್ಯತಾ ನಿವಾರಣೆ ಆಂದೋಲನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಮಹಾನ್ ಪುರುಷರು ಜನ್ಮ ತಾಳಿ ಜಾತೀ ಎಂಬ ಭೂತವನ್ನು ತೊಡೆದು ಹಾಕಲು ಪ್ರಯತ್ನ ಪಟ್ಟರೂ ಇಂದಿಗೂ ಜಾತಿ ವ್ಯವಸ್ಥೆ ನಮ್ಮಲ್ಲಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕಿದೆ ಆಗ ಮಾತ್ರ ನಾವು ಸುಭದ್ರವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಅಸ್ಪೃಶ್ಯತಾ ನಿವಾರಣೆ ಅಭಿಯಾನವನ್ನು ಹಳ್ಳಿಹಳ್ಳಿಯಲ್ಲಿ ಹಮ್ಮಿಕೊಂಡಿದೆ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್ ಮಾತನಾಡಿ, ಅಸ್ಪೃಶ್ಯತೆ ಎಂಬುದು ಸಮಾಜದಲ್ಲಿ ಒಂದು ದೊಡ್ಡ ಪಿಡುಗಾಗಿದೆ. ಇಂತಹ ಅನಿಷ್ಟ ಪದ್ಧತಿಗಳನ್ನು ಸಮಾಜದಿಂದ ತೊಡೆದು ಹಾಕಬೇಕು ಎಂಬ ಮಹಾನ್ ಸಂಕಲ್ಪದೊಂದಿಗೆ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಇಡೀ ರಾಜ್ಯದಲ್ಲಿ ಅಸ್ಪೃಶ್ಯತಾ ನಿವಾರಣೆ ಆಂದೋಲನವನ್ನು ಬೀದಿ ನಾಟಕಗಳ ಮೂಲಕವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ನಡೆಸುತ್ತಿದೆ. ತಾಲೂಕಿನ ದೌರ್ಜನ್ಯಗಳ ನಡೆದ ಸೂಕ್ಷ್ಮ ಸ್ಥಳದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನಕ್ಕೆ ಶಾಸಕರು ಹಾಗೂ ತಹಸೀಲ್ದಾರ್ ಅವರು ಚಾಲನೆಯನ್ನು ನೀಡಿದ್ದಾರೆ ಎಂದು ಹೇಳಿದರು.