ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ಅಂಗವಾಗಿ ನಗರದ 31 ವಾರ್ಡಗಳಲ್ಲಿ ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಹಾವೇರಿ: ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ಅಂಗವಾಗಿ ನಗರದ 31 ವಾರ್ಡಗಳಲ್ಲಿ ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಇಲ್ಲಿಯ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ದಾಸೋಹ ಮಂದಿರದಲ್ಲಿ ಹಮ್ಮಿಕೋಂಡಿದ್ದ ಜನಜಾಗೃತಿ ಪಾದಯಾತ್ರೆಯ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಇದೇ ಡಿ.10ರಿಂದ 22ರ ವರೆಗೆ ಈ ಜನಜಾಗೃತಿ ಪಾದಯಾತ್ರೆಯು ನಗರದ ವಾರ್ಡಗಳಲ್ಲಿ ಸಂಚರಿಸಲಿದೆ. ದುಶ್ಟಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆಯ ಅಭಿಲಾಷೆಯೊಂದಿಗೆ ನಗರದ ಪ್ರಮುಖ ವಾರ್ಡಗಳಲ್ಲಿ ಪಾದಯಾತ್ರೆ ಜರುಗಲಿದೆ. ಡಿ. 9ರಿಂದ ಪ್ರೌಢಶಾಲೆಯ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ಹಾಗೂ ಡಿ. 25ರಿಂದ 30ರ ವರೆಗೆ ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತವೆ ಎಂದು ಹೇಳಿದರು.ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಎಲ್ಲ ದಾರಿಗಳು ಬಸವಕಲ್ಯಾಣದತ್ತ ಹೋಗುತ್ತಿದ್ದವು. ಅದೇ ರೀತಿ ಇಂದು ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಿಂದ ಎಲ್ಲ ದಾರಿಗಳು ಮರಿ ಕಲ್ಯಾಣ ಖ್ಯಾತಿಯ ಹಾವೇರಿಯತ್ತ ಬರುತ್ತವೆ. ಹಲವು ವಿಧಾಯಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯುತ್ತಿವೆ. ನಗರದ ಸಮಸ್ತ ಜನತೆಯು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ನ ಭೂತೋ ನ ಭವಿಷ್ಯತಿ ಎಂಬಂತೆ ಐತಿಹಾಸಿಕ ಕಾರ್ಯಕ್ರಮವಾಗಲು ಶ್ರಮಿಸಬೇಕೆಂದು ಹೇಳಿದರು.ವಿಜಯಪುರದ ಷಣ್ಮುಖಾರೂಢ ಅಭಿನವ ಸಿದ್ಧರೂಢ ಸ್ವಾಮೀಜಿ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯ ನೀಡಿದ ಮಠಗಳಲ್ಲಿ ಹಾವೇರಿಯ ಹುಕ್ಕೇರಿಮಠವೂ ಒಂದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಈಗ ಈ ಮಠದ ಋಣವನ್ನು ತೀರಿಸಲು ಸಕಾಲವಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಮಾಡದ ಸುವರ್ಣ ತುಲಾಭಾರ ಸಮಾರಂಭವನ್ನು ಯಶಸ್ವಿಯಾಗಿ ಮಾಡಿದ ಶ್ರೇಯಸ್ಸು ಶ್ರೀಮಠಕ್ಕೆ ಸಲ್ಲಿದೆ. ಈಗ ಮತ್ತೊಂದು ಸುವರ್ಣಾಕ್ಷರದಲ್ಲಿ ಬರೆದಿಡುವಂಥ ಅವಕಾಶ ಒದಗಿ ಬಂದಿದ್ದು, ಸಮಸ್ತ ಭಕ್ತ ಸಮೂಹವು ಇದಕ್ಕೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತರು ಇರುವಲ್ಲಿಯೇ ಸ್ವಾಮಿಗಳು ಬರುವದು ಈ ಪಾದಯಾತ್ರೆಯ ವಿಶೇಷವಾಗಿದೆ. ಕಾವಿಯು ಸಮಾಜಕ್ಕೆ ದುಡಿಯುತ್ತದೆ. ಅಂಥಹ ಸಮಾಜೋಧಾರ್ಮಿಕ ಯಾತ್ರೆಯು ಬಂದಾಗ ತಮ್ಮ ಪ್ರದೇಶವನ್ನು ಸುಂದರಗೊಳಿಸಿ, ಅಲಂಕರಿಸಿ, ಶ್ರದ್ಧಾಭಕ್ತಿಯೊಂದಿಗೆ ಬರಮಾಡಿಕೊಳ್ಳಿ ಎಂದು ಹೇಳಿದರು.ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಉದ್ಯಮಿ ಮಹೇಶ ಚಿನ್ನಿಕಟ್ಟಿ ಇತರರು ಉಪಸ್ಥಿತರಿದ್ದರು. ಬಿ. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.