ನಾಳೆಯಿಂದ ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ

| Published : Aug 26 2025, 02:00 AM IST

ಸಾರಾಂಶ

ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಆ.27ರಿಂದ 31ರವರೆಗೆ 62ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯಲಿದೆ.

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಆ.27ರಿಂದ 31ರವರೆಗೆ 62ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ನಾರಾಯಣ ಪಿ.ಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸರ್ವಧರ್ಮದವರೊಂದಿಗೆ ಮೂಡುಬಿದಿರೆ ಹಬ್ಬವಾಗಿ ಆಚರಿಸುವ ಗಣೇಶೋತ್ಸವಕ್ಕೆ ಮಂಗಳವಾರ ಬೆಳಗ್ಗೆ 10ಕ್ಕೆ ಎಂಸಿಎಸ್ ಸೊಸೈಟಿ ಎದುರು ಮೆರವಣಿಗೆಗೆ ಚಾಲನೆ ನೀಡಲಾಗುವುದು. ಬೆಳ್ಳಿಯ ರಥ, ದೇವರ ಪ್ರಭಾವಳಿ ತರಲಾಗುವುದು. ಎಂಸಿಎಸ್ ಬ್ಯಾಂಕ್ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಮೆರವಣಿಗೆಯ ನೇತೃತ್ವದ ವಹಿಸಲಿದ್ದಾರೆ ಎಂದು ತಿಳಿಸಿದರು.

27ರಂದು ಬೆಳಗ್ಗೆ 9.30ಕ್ಕೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಉತ್ಸವಕ್ಕೆ ಚಾಲನೆ ನೀಡಲಿರುವರು, 10.15ಕ್ಕೆ ಅಲಂಗಾರಿನ ಈಶ್ವರ ಭಟ್ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಿರುವರು. ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆ.30ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ತಹಸೀಲ್ದಾರ್ ಶ್ರೀಧರ್ ಎಸ್.ಮುಂದಲಮನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಭಾಗವಹಿಸುವರು ಎಂದರು.

ಟ್ರಸ್ಟ್‌ ಉಪಾಧ್ಯಕ್ಷ ರಾಜರಾಂ ನಾಗರಕಟ್ಟೆ ಮಾತನಾಡಿ, ಶೋಭಾಯಾತ್ರೆ ರಾತ್ರಿ 11.30ರ ಮುಂಚಿತವಾಗಿ ಅಲಂಗಾರು ದೇವಸ್ಥಾನದ ದ್ವಾರ ಪ್ರವೇಶಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಉಪಾಧ್ಯಕ್ಷ ಕೊರಗ ಶೆಟ್ಟಿ,ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.