ಕನ್ನಡಪ್ರಭ ವಾರ್ತೆ ಆಲೂರು

ಸಾರ್ವಜನಿಕರು ತಮ್ಮ ಕುಂದುಕೊರತೆಗಳ ನಿವಾರಣೆ ಬಗ್ಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಹಸೀಲ್ದಾರ್‌ ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ಮಿನಿ ವಿದಾನಸೌಧದ ಸಭಾಂಗಣದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆಗಳಲ್ಲಿ ಬಂದಿರುವ ಅರ್ಜಿಗಳನ್ನು ಜನಸಂಪರ್ಕ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲಿಸಿ ಸೂಕ್ತ ಉತ್ತರ/ಪರಿಹಾರ ಕಲ್ಪಿಸಲಾಗುವುದು. ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಮೊದಲನೇ ಶನಿವಾರ ಜನಸ್ಪಂದನ ಸಭೆ ಮತ್ತು ಮೂರನೆ ಸೋಮವಾರ ರೈತಸಂಪರ್ಕ ಸಭೆ ನಡೆಸಲಾಗುವುದು. ತಾಲೂಕಿನಲ್ಲಿ ೧೧ ಕಲ್ಲು ಕ್ವಾರಿಗಳಿವೆ. ಇದರಲ್ಲಿ ಒಂದು ಸಹಕಾರ ಸಂಘ, ಒಂದು ಗ್ರಾನೈಟ್ ಗಣಿ ಇದೆ. ಕಲ್ಲುಗಣಿಗಳಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ಸಂದರ್ಭದಲ್ಲಿ ದಿಢೀರ್‌ ದಾಳಿ ನಡೆಸಿ, ಪ್ರತಿ ಲಾರಿಯಲ್ಲಿ ಟ್ರಿಪ್‌ಶೀಟ್, ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಪೊಲೀಸ್ ಠಾಣೆ ಎದುರು ನಿಲ್ಲಿಸಿರುವ ಎರಡು ಲಾರಿಗಳಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಸೂಕ್ತ ಜಾಗಕ್ಕೆ ಲಾರಿಗಳನ್ನು ರವಾನಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ದೇವರಾಜು ರವರಿಗೆ ಸೂಚಿಸಿದರು.

ಕಲ್ಲು ಸಾಗಿಸುವ ಸಂದರ್ಭದಲ್ಲಿ ರಸ್ತೆಗಳು ದುರಸ್ತಿಗೀಡಾದರೆ ಸ್ಥಳೀಯ ಪಂಚಾಯಿತಿ ವತಿಯಿಂದ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ ಎಂದರು.ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.