ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ತಾಲೂಕು ಆಡಳಿತದ ವಿರುದ್ಧ ಕಳೆದ ೯ ದಿನಗಳಿಂದ ನಡೆಸುತ್ತಿರುವ ಕೆಲ ಪ್ರಗತಿಪರ ಸಂಘಟನೆಗಳು ಧರಣಿ ಸಮಸ್ಯೆಯ ಕುರಿತಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರವೂ ಧರಣಿ ಮುಂದುವರಿಕೆ ಸರಿಯಲ್ಲ, ಇದರಿಂದ ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ದಲಿತ ಸಂಘಟನೆ ಮುಖಂಡ, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.ಪಟ್ಟಣದಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿ ನಡೆಸುವುದು ಪ್ರತಿಯೊಬ್ಬರ ಸ್ವಾತಂತ್ರ್ಯ. ಆದರೆ ಧರಣಿನಿರತರು ನೀತಿ, ನಿಯಮಗಳನ್ನು ಪಾಲನೆ ಮಾಡುವುದು ಅವಶ್ಯಕ. ಕಳೆದ ೯ ದಿನಗಳಿಂದ ತಹಸೀಲ್ದಾರ್ ವಿರುದ್ಧ ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಮಿಯಾನ ಹಾಕಿ ನಡೆಸುತ್ತಿರುವ ಧರಣಿ, ಧ್ವನಿವರ್ಧಕದಿಂದ ಶಬ್ಧ ಮಾಲಿನ್ಯವಾಗುತ್ತಿದೆ. ಇದರಿಂದ ತಾಲೂಕು ಕಚೇರಿ ಸುತ್ತಮುತ್ತ ಇರುವ ಏಳೆಂಟು ಸರ್ಕಾರಿ ಇಲಾಖೆಗಳ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ತಾಲೂಕು ಆಡಳಿತದ ವಿರುದ್ಧ ಕೇಳಿಬಂದ ಆರೋಪದ ಸಲುವಾಗಿ ಧರಣಿ ಮಾಡುತ್ತಿರುವವರ ಅಹವಾಲನ್ನು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೇಳಿದ್ದಾರೆ. ಇದರೊಂದಿಗೆ ಜಿಲ್ಲಾಮಂತ್ರಿ, ಕಂದಾಯ ಮಂತ್ರಿ, ಶಾಸಕರು ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಕೆ ಮಾಡಿದ್ದಾರೆ. ಅವರು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆದಾಗ್ಯೂ ವೈಯಕ್ತಿಕ ಹಿತಾಸಕ್ತಿ ಬಯಸಿ, ಒಬ್ಬ ವ್ಯಕ್ತಿಯನ್ನು ಕೇಂದ್ರಿಕರಿಸಿ ಧರಣಿ ಮಾಡುವುದು ತರವಲ್ಲವೆಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಪುರಸಭಾ ಮಾಜಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿ, ಧರಣಿನಿರತರು ವ್ಯಕ್ತಿಗತವಾಗಿ ಒಬ್ಬರ ತೇಜೋವಧೆ ಮಾಡುತ್ತಿರುವುದು ತರವಲ್ಲ, ರಾಮನಗರ ಜಿಲ್ಲೆಯಲ್ಲಿ ನಡೆದ ಹಳೆಯ ಆಡಿಯೋ ತುಣಕನ್ನಿಟ್ಟುಕೊಂಡು ತಹಸೀಲ್ದಾರ್ ತೇಜೋವಧೆ ಸರಿಯಲ್ಲ, ಈ ಕುರಿತಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಅವರಿಂದ ತನಿಖೆ ನಡೆಸುವ ಉತ್ತರವೂ ಸಿಕ್ಕಿದೆ. ನಂತರವೂ ಧರಣಿ ಮಾಡುತ್ತಿರುವ ಕ್ರಮ ಸರಿಯಲ್ಲ, ಕೆಲ ಭೂ ವ್ಯವಹಾರಿಗಳ ಹಿತಾಸಕ್ತಿಗೋಸ್ಕರ ಧರಣಿ ನಡೆಸಿ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಈ ಬಗೆ ತಾಲೂಕಿನಲ್ಲಿ ೧೫ ಸಾವಿರ ಕರಪತ್ರ ಹಂಚಿದರೂ ಸಾರ್ವಜನಿಕರು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ, ಇದರೊಂದಿಗೆ ತಾಲೂಕು ಆಡಳಿತದಿಂದ ತನಗೆ ಅನ್ಯಾಯವಾಗಿದೆ. ಯಾವೊಬ್ಬ ರೈತರು ದೂರು ನೀಡಿಲ್ಲ, ಭ್ರಷ್ಟತೆ ನಡೆದಿದ್ದರೇ ಲೋಕಾಯಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದರು.ಸುದ್ದಿಗೋಷ್ಠಿಯಲ್ಲಿ ನಾಯಕ ಸಮುದಾಯದ ಮುಖಂಡ ರಾಮು, ವಿಶ್ವನಾಥ ನೇರಲಕೆರೆ, ಪ್ರಭು ಅಕ್ಕನಹಳ್ಳಿ ಇದ್ದರು.