ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘವು ಒತ್ತಡದ ನಡುವೆಯೂ ಸಮಾಜಮುಖಿ ಸೇವೆಯಲ್ಲಿ ತೊಡಗಿರುವುದು ರಾಜ್ಯಕ್ಕೆ ಮಾದರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ದೊಡ್ಡೇರಿ ಕಣಿಮಯ್ಯ ಅಭಿಪ್ರಾಯಪಟ್ಟರು.ಇಲ್ಲಿನ ತಾಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ,ಜಿಲ್ಲಾ ಪತ್ರಕರ್ತರ ಸಂಘ ಮತ್ತು ಟೀಮ್ ಈಶ್ವರ್ ಮಲ್ಪೆ ಇವರ ಸಂಯುಕ್ತಾಶ್ರಯದಲ್ಲಿ ಕಿವಿ ತಪಾಸಣಾ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ನಮ್ಮ ಸಂಘವು ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಎರಡು ಸಾವಿರ ವಿದ್ಯಾರ್ಥಿಗಳಿಗೆ ಲೇಖನಿ ವಿತರಿಸುವ ಮೂಲಕ ತನ್ನ ಉದಾರತೆಯನ್ನು ತೋರಿದ್ದು ,ಪ್ರಸ್ತುತ ಕಿವಿ ತಪಾಸಣಾ ಶಿಬಿರ ಏರ್ಪಡಿಸಿ ಜನಮುಖಿ ಕಾರ್ಯವನ್ನು ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಂಘದಿಂದ ಜಿಲ್ಲಾಧ್ಯಕ್ಷ ಯೋಗಿಶ್ ಮಾರ್ಗದರ್ಶನದಲ್ಲಿ ಹತ್ತಾರು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.ತಾಲೂಕು ಅಧ್ಯಕ್ಷ ಎಂ.ಎನ್.ರಾಜೇಂದ್ರ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘಕ್ಕೆ ಹಲವು ದಶಕಗಳಿಂದ ಕಚೇರಿ ಇರಲಿಲ್ಲ, ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಮತ್ತು ಎಂಎಲ್ಸಿ ಆರ್ . ರಾಜೇಂದ್ರರವರ ಸಹಕಾರದಿಂದ ತಾತ್ಕಲಿಕ ಕಚೇರಿ ತೆರೆದಿದ್ದು ಸಂಘದ ಚಟುವಟಿಕೆಗಳನ್ನು ನಡೆಸಲು ಉಪಯುಕ್ತವಾಗಿದೆ ಎಂದರು.
ವೈದ್ಯರಾದ ಪವನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಿವಿ ಮನುಷ್ಯನ ದೇಹದಲ್ಲಿ ಪ್ರಮುಖ ಅಂಗ, ಈ ಕಿವಿಗೆ ಮೂರು ಭಾಗಗಳಿಂದ ಶಬ್ದವು ನರಗಳ ಮೂಲಕ ಮೆದುಳಿಗೆ ತಲುಪುತ್ತದೆ. ಇದು ಕೇಳಿಸದಿದ್ದರೆ ಶ್ರವಣ ದೋಷವಾಗಿದೆ ಎಂದರ್ಥ ಆಗ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದರು.
ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯ ಸಂಚಾಲಕ ಲವ ಕುಮಾರ್ ಬಂಗೇರಾ ಮಾತನಾಡಿ, ವ್ಯಕ್ತಿಯ ಪಂಚೇಂದ್ರಿಗಳು ಮುಖ್ಯ, ಆದ್ದರಿಂದ ಕಾಲ ಕಾಲಕ್ಕೆ ವಯಸ್ಸಾದಂತೆ ತಪಾಸಣೆಗೆ ಒಳಗಾಗಬೇಕು. ಈಶ್ವರ್ ಮಲ್ಪೆ ತಂಡದಿಂದ 140ನೇ ತಪಾಸಣಾ ಶಿಬಿರವನ್ನು ಮಧುಗಿರಿಯ ಪತ್ರಕರ್ತರು ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗಂಗಾಧರ್ ರೆಡ್ಡಿಹಳ್ಳಿ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಸೋಮಶೇಖರ್, ಖಜಾಂಚಿ ಕಂಬಣ್ಣ, ಸಹ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ಹೊಸಕೆರೆ ಗೋವಿಂದರಾಜು, ಕೆ.ಎಸ್.ರಾಮಚಂದ್ರರಾವ್, ದೊಡ್ಡೇರಿ ಲಕ್ಷ್ಮಣ್, ಶೇಷ ನಾಯಕ್ , ಕಿರಣ್, ಕಸಾಪ ಕಾರ್ಯದರ್ಶಿ ರಂಗಧಾಮಯ್ಯ, ಕಸಾಪ ಘಟಕದ ಅಧ್ಯಕ್ಷ ಪಿ.ಕೆ.ರಂಗಸ್ವಾಮಿ ಇತರರಿದ್ದರು.