ಎಲ್‌ ಆ್ಯಂಡ್‌ ಟಿ ಕಂಪನಿಯ ವಿರುದ್ಧ ಸಾರ್ವಜನಿಕರ ಆಕ್ರೋಶ

| Published : Mar 01 2024, 02:18 AM IST

ಎಲ್‌ ಆ್ಯಂಡ್‌ ಟಿ ಕಂಪನಿಯ ವಿರುದ್ಧ ಸಾರ್ವಜನಿಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಗ ಮತ್ತೆ ಕೆಲದಿನಗಳಿಂದ ಎಲ್‌ಆ್ಯಂಡ್‌ಟಿ ಬಿಲ್ ನೀಡುತ್ತಿದ್ದು, ಮನೆ-ಮನೆಗೆ ತಲಾ ₹70 ಸಾವಿರದಿಂದ ₹1 ಲಕ್ಷ ಮೀರಿದ ಬಿಲ್‌ಗಳನ್ನು ನೀಡುತ್ತಿದ್ದಾರೆ. ನಿತ್ಯ ದುಡಿದು ಜೀವನ ನಡೆಸುತ್ತಿರುವ ಬಡ ಕುಟುಂಬದವರೆ ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಿಗೆ ಈ ರೀತಿ ಲಕ್ಷಾಂತರ ಬಿಲ್‌ ನೀಡಿದರೆ ಅವರ ಜೀವನ ನಡೆಸುವುದಾದರೂ ಹೇಗೆ

ಹುಬ್ಬಳ್ಳಿ: ಇಲ್ಲಿನ ಭುವನೇಶ್ವರಿ ನಗರ, ಹೆಗ್ಗೇರಿಯ ಜನತಾ ಮನೆ ಸೇರಿದಂತೆ ಅವಳಿ ನಗರದ ಹಲವು ಮನೆಗಳಿಗೆ ಎಲ್‌ಆ್ಯಂಡ್‌ಟಿ ಕಂಪನಿಯವರು ಸಾವಿರಾರು ರುಪಾಯಿ ಬಿಲ್‌ ನೀಡಿರುವುದನ್ನು ಖಂಡಿಸಿ ಗುರುವಾರ ಸಮತಾ ಸೇನಾ ಹಾಗೂ ಭುವನೇಶ್ವರಿ ಸೇವಾ ಸಂಘದಿಂದ ಪಾಲಿಕೆ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸಮತಾ ಸೇನಾದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಭುವನೇಶ್ವರಿನಗರ ಹಾಗೂ ಅವಳಿನಗರದ ಅನೇಕ ಬಡಾವಣೆಗಳು 1980-81 ನೇ ಸಾಲಿನಲ್ಲಿ ನಿರ್ಮಾಣಗೊಂಡ ಮನೆಗಳ ನಿವಾಸಿಗಳು ಪಜಾ, ಪಪಂದವರಿದ್ದು, ತೀವ್ರ ಮನವಿ, ಹೋರಾಟಗಳ ನಂತರ 2005-06 ರಲ್ಲಿ ನೀರಸಾಗರ ಕೆರೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ 2007ರ ವರೆಗೆ ಮನೆ ಮನೆಗೆ ಸಂಪರ್ಕ ಕಲ್ಪಿಸಲಾಯಿತು.

ಹೀಗೆ ಸಂಪರ್ಕ ಕಲ್ಪಿಸಿದ ಕೆಲವೇ ದಿನಗಳಲ್ಲಿ ₹ 10 ಸಾವಿರ, ₹12 ಸಾವಿರದ ಬಿಲ್‌ ನೀಡಲಾಯಿತು. ಹೀಗೆ ಮುಂದುವರೆದ ಬಿಲ್‌ಗಳು ₹ 30 ಸಾವಿರ ಮುಟ್ಟಿದಾಗ ನಾವು ಕುಡಿದ ನೀರಿಗೆ ಮಾತ್ರ ಬಿಲ್ ಕಟ್ಟುವ ಹೋರಾಟ ಆರಂಭಿಸಲಾಯಿತು. ಈ ಹೋರಾಟ ತೀವ್ರಗೊಂಡು ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಜಲ ಮಂಡಳಿಯು ಬಡ್ಡಿ ಮನ್ನಾ ಮಾಡುವ ಯೋಜನೆಯ ಕೋರಿಕೆ ಪತ್ರ ನೀಡಿ ಸದರಿ ಬಿಲ್‌ಗಳನ್ನು ತಿದ್ದುಪಡಿ ಮಾಡಿ ₹ 6,000, ₹7,500- ಹೀಗೆ ಬಿಲ್‌ಗಳನ್ನು ನೀಡಿ ಒಂದೇ ಬಾರಿಗೆ ಭರಣಾ ಮಾಡಿಸಿಕೊಂಡಿತು ಮತ್ತು ಮಾಸಿಕ ಮೀಟರ್ ಇದ್ದವರಿಗೆ ಬಳಕೆಯ ಪ್ರಮಾಣದಂತೆ ಮತ್ತು ಇತರರಿಗೆ ಕನಿಷ್ಠ ₹ 20 ಬಿಲ್ ನೀಡಲಾಗುತ್ತಿತ್ತು.

ಆದರೆ, ಕೆಲ ತಿಂಗಳುಗಳ ನಂತರ ಅದನ್ನು ಹಠಾತ್ ನಿಲ್ಲಿಸಿದ ಜಲ ಮಂಡಳಿ ಮರಳಿ ಬಿಲ್ ವಿತರಿಸಲಿಲ್ಲ. ಈಗ ಮತ್ತೆ ಕೆಲದಿನಗಳಿಂದ ಎಲ್‌ಆ್ಯಂಡ್‌ಟಿ ಬಿಲ್ ನೀಡುತ್ತಿದ್ದು, ಮನೆ-ಮನೆಗೆ ತಲಾ ₹70 ಸಾವಿರದಿಂದ ₹1 ಲಕ್ಷ ಮೀರಿದ ಬಿಲ್‌ಗಳನ್ನು ನೀಡುತ್ತಿದ್ದಾರೆ. ನಿತ್ಯ ದುಡಿದು ಜೀವನ ನಡೆಸುತ್ತಿರುವ ಬಡ ಕುಟುಂಬದವರೆ ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಿಗೆ ಈ ರೀತಿ ಲಕ್ಷಾಂತರ ಬಿಲ್‌ ನೀಡಿದರೆ ಅವರ ಜೀವನ ನಡೆಸುವುದಾದರೂ ಹೇಗೆ. ಈ ಕುರಿತು ಪಾಲಿಕೆ ಆಯುಕ್ತರು ಆಗಿರುವ ತಪ್ಪನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಈ ವೇಳೆ ಹನಮಂತ ಮೂಲಿಮನಿ, ಎಂ.ವೈ. ಬಾಗಲಕೋಟ, ಗಣೇಶ ಮಿಶ್ರಿಕೋಟಿ, ಹನಮಂತ ಕೋಳೂರ, ಬಿ.ಎಂ. ದೊಡ್ಡಮನಿ, ಮಲ್ಲಪ್ಪ ಮ್ಯಾಗೇರಿ, ರತ್ನವ್ವ ಬೆಂಡಿಗೇರಿ, ಉಮೇಶ ಹಲಗಿ, ಮಂಜುಳಾ ಹಂಜಗಿ, ಸಂತೋಷ ಕದಂ, ವೈ.ಎಚ್‌. ಬಾಗಲಕೋಟಿ ಸೇರಿದಂತೆ ಹಲವರಿದ್ದರು.