ಪಾಲಿಕೆ ಆಯುಕ್ತರ ಪ್ರತಿಕೃತಿ ದಹಿಸಿ ಪೌರಕಾರ್ಮಿಕರ ಆಕ್ರೋಶ

| Published : Dec 28 2024, 12:46 AM IST

ಪಾಲಿಕೆ ಆಯುಕ್ತರ ಪ್ರತಿಕೃತಿ ದಹಿಸಿ ಪೌರಕಾರ್ಮಿಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 17 ದಿನಗಳಿಂದ ನೇರ ನೇಮಕಾತಿ, ನೇರ ವೇತನ ಪಾವತಿ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸ್ಪಂದಿಸುತ್ತಿಲ್ಲ.

ಹುಬ್ಬಳ್ಳಿ:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ಎದುರು ಪೌರಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ 17ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತರು ಪಾಲಿಕೆ ಆಯುಕ್ತರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 17 ದಿನಗಳಿಂದ ನೇರ ನೇಮಕಾತಿ, ನೇರ ವೇತನ ಪಾವತಿ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸ್ಪಂದಿಸುತ್ತಿಲ್ಲ. ಸರ್ಕಾರದ ಆದೇಶದಂತೆ ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡದೇ ವಂಚಿಸುತ್ತಿದ್ದಾರೆ. ಸರ್ಕಾರ ಆದೇಶವನ್ನು ಧಿಕ್ಕರಿಸಿ ಕಾನೂನು ಬಾಹಿರವಾಗಿ ಗುತ್ತಿಗೆ ಮುಂದುವರಿಸಿದ್ದಾರೆ. ಪಾಲಿಕೆ ಠರಾವು ಅನ್ವಯ ಕನಿಷ್ಠ ವೇತನ ವ್ಯತ್ಯಾಸದ ಬಾಕಿ ₹ 9 ಕೋಟಿ ಪಾವತಿಸಬೇಕು. ಪಾಲಿಕೆ ಆಯುಕ್ತರ ಆದೇಶದಂತೆ 868 ಮಹಿಳಾ ಪೌರಕಾರ್ಮಿಕರಿಗೆ ತಲಾ ₹2500 ರಂತೆ ಒಟ್ಟು ₹ 21.70 ಲಕ್ಷ ಪಾವತಿಸಬೇಕು. ತುಟ್ಟಿಭತ್ಯೆ ಬಾಕಿ ಮೊತ್ತ ₹ 2 ಕೋಟಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ, ಸಾತಪ್ಪ ಉಳ್ಳಿಕಾಶಿ, ತಾಯಪ್ಪ ಯಮನಾಳ, ಸುಮಿತ್ರಾ ಹೊಸಹಳ್ಳಿ, ಸುನೀಲ ದೊಡ್ಡಮನಿ, ಶರೀಫ್ ಮಸರಕಲ್, ದತಪ್ಪ ಆಪುಸಪೇಟ್, ಪ್ರೇಮಾ ಕಣೆಕಲ್, ರಾಜು ನಾಗರಾಳ, ಗಾಳೆಪ್ಪ ದ್ವಾಸಲಕೇರಿ, ಸುನೀಲ್ ಪಾಟೀಲ, ನಾಗೇಶ ಚುರಮುರಿ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಧರಣಿ ನಿರತ ಮಹಿಳೆ ಅಸ್ವಸ್ಥ:

ಪಾಲಿಕೆ ಎದುರು ಪೌರಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಿರತ ಪೌರಕಾರ್ಮಿಕಳೋರ್ವಳು ಶುಕ್ರವಾರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಮಲಾ ಆಲೂರ ಅಸ್ವಸ್ಥಳಾದ ಮಹಿಳಾ ಪೌರಕಾರ್ಮಿಕಳು. ಈಗ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.