ಸಾರ್ವಜನಿಕರ ಕುಂದು-ಕೊರತೆ ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳು ಎಲ್ಲಾ ಶನಿವಾರಗಳಂದು “ಪ್ರಜಾಸೇವೆ ಆಂದೋಲನ” ಸಭೆ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 5ರಿಂದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಸಾರ್ವಜನಿಕರ ಕುಂದು-ಕೊರತೆ ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳು ಎಲ್ಲಾ ಶನಿವಾರಗಳಂದು “ಪ್ರಜಾಸೇವೆ ಆಂದೋಲನ” ಸಭೆ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 5ರಿಂದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸೆಪ್ಟೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ಪ್ರಜಾಸೇವಾ ಆಂದೋಲನ ಸಭೆ ನಡೆಸಲಾಗುವುದು. ಅದೇ ದಿನ ಜಿಲ್ಲೆಯ ಉಳಿದ 9 ತಾಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದ್ದು, ಸೆಪ್ಟೆಂಬರ್ 12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದೆ.
ಸಾರ್ವಜನಿಕರು ಅಹವಾಲುಗಳೇನಾದರೂ ಇದ್ದಲ್ಲಿ ಸೆಪ್ಟೆಂಬರ್ 5 ಹಾಗೂ 12ರಂದು ನಡೆಯುವ ಪ್ರಜಾಸೇವೆ ಆಂದೋಲನ ಸಭೆಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬಹುದಾಗಿದೆ. ಅಲ್ಲದೇ ಸಭಾ ಸ್ಥಳಗಳಲ್ಲಿ ತೆರೆಯಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರಿಕರು ತಮ್ಮ ಅಹವಾಲು /ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.ಪ್ರಜಾಸೇವೆ ಆಂದೋಲನ ಸಭೆಯನ್ನು ಸೆಪ್ಟೆಂಬರ್ ೫ರಂದು ತುಮಕೂರು ಉಪವಿಭಾಗ ವ್ಯಾಪ್ತಿ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅಂಬೇಡ್ಕರ್ ಭವನದಲ್ಲಿ, ಕುಣಿಗಲ್ ತಾಲೂಕು - ಹುತ್ರಿದುರ್ಗ ಹೋಬಳಿ ಸಂತೇಪೇಟೆ ಗ್ರಾಮ ಪಂಚಾಯತಿ ಪಕ್ಕದ ಆವರಣ, ಗುಬ್ಬಿ ಪಟ್ಟಣ ಡಾ: ಗುಬ್ಬಿ ವೀರಣ್ಣ ರಂಗಮಂದಿರ; ಮಧುಗಿರಿ ಉಪವಿಭಾಗ ವ್ಯಾಪ್ತಿ - ಮಧುಗಿರಿ ತಾಲೂಕು ಕಚೇರಿ ಆವರಣ, ಶಿರಾ ತಾಲೂಕು ಗೌಡಗೆರೆ ಗ್ರಾಮ ಪಂಚಾಯತಿ ಆವರಣ, ಕೊರಟಗೆರೆ ತಾಲೂಕು - ಹೊಳವನಹಳ್ಳಿ ಹೋಬಳಿ ಸಮುದಾಯ ಭವನ, ಪಾವಗಡ ತಾಲೂಕು - ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯತಿ ಆವರಣ; ತಿಪಟೂರು ಉಪವಿಭಾಗ - ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿ ಹುಡಿಸಲಮ್ಮ ದೇವಸ್ಥಾನ ಆವರಣ, ಚಿಕ್ಕನಾಯಕನಹಳ್ಳಿ ತಾಲೂಕು - ಕಂದಿಕೆರೆ ಗ್ರಾಮ ಪಂಚಾಯತಿ ಆವರಣ ಹಾಗೂ ತುರುವೇಕೆರೆ ತಾಲೂಕು - ಮಾಯಸಂದ್ರ ಹೋಬಳಿ ರಂಗಮಂದಿರ ಸಭಾಂಗಣದಲ್ಲಿ ನಡೆಸಲಾಗುವುದು.
ಸೆಪ್ಟೆಂಬರ್ 12ರಂದು ತುಮಕೂರು ಉಪವಿಭಾಗ ವ್ಯಾಪ್ತಿ - ತುಮಕೂರು ತಾಲೂಕು ಬೆಳ್ಳಾವಿ ಗ್ರಾಮ ಪಂಚಾಯತಿ ಆವರಣ, ಕುಣಿಗಲ್ ತಾಲೂಕು ಎಡೆಯೂರು ಗ್ರಾಮ ಪಂಚಾಯತಿ ಆವರಣ, ಗುಬ್ಬಿ ತಾಲೂಕು ಚೇಳೂರು ನಾಡಕಚೇರಿ ಆವರಣ; ಮಧುಗಿರಿ ಉಪವಿಭಾಗ ವ್ಯಾಪ್ತಿ ಮಧುಗಿರಿ ತಾಲೂಕು - ದೊಡ್ಡೇರಿ ಹೋಬಳಿ ಬಾಬು ಜಗಜೀವನ್ ರಾಂ ಸಮುದಾಯ ಭವನ, ಶಿರಾ ತಾಲೂಕು - ಹುಲಿಕುಂಟೆ ನಾಡ ಕಚೇರಿ ಆವರಣ, ಕೊರಟಗೆರೆ ತಾಲೂಕು - ಕೋಳಾಲ ಹೋಬಳಿ ಗ್ರಾಮ ಪಂಚಾಯತಿ ಆವರಣ, ಪಾವಗಡ ತಾಲೂಕು - ನಾಗಲಮಡಿಕೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭವನ ಆವರಣ; ತಿಪಟೂರು ಉಪವಿಭಾಗ ತಿಪಟೂರು ತಾಲೂಕು - ಕಿಬ್ಬನಹಳ್ಳಿ ಎಪಿಎಂಸಿ ಕಚೇರಿ ಆವರಣ, ಚಿಕ್ಕನಾಯಕನಹಳ್ಳಿ ತಾಲೂಕು - ಶೆಟ್ಟಿಕೆರೆ ನಾಡ ಕಚೇರಿ ಆವರಣ ಹಾಗೂ ತುರುವೇಕೆರೆ ತಾಲೂಕು - ದಬ್ಬೇಘಟ್ಟ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.