ಸಾರ್ವಜನಿಕರು ಡೆಂಘೀ ರೋಗದ ಬಗ್ಗೆ ಎಚ್ಚರಿಕೆ ವಹಿಸಲಿ: ಪ್ರಕಾಶ ಕರ್ಜಗಿ

| Published : Aug 06 2024, 12:36 AM IST

ಸಾರ್ವಜನಿಕರು ಡೆಂಘೀ ರೋಗದ ಬಗ್ಗೆ ಎಚ್ಚರಿಕೆ ವಹಿಸಲಿ: ಪ್ರಕಾಶ ಕರ್ಜಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಮನೆ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮವಹಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ ಹೇಳಿದರು.

ಲಕ್ಷ್ಮೇಶ್ವರ:

ಗ್ರಾಮೀಣ ಭಾಗದಲ್ಲಿ ಡೆಂಘೀ ಜ್ವರ ವೇಗವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಸಾರ್ವಜನಿಕರು ಮನೆ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮವಹಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ ಹೇಳಿದರು.ಸಮೀಪದ ಗೋವನಾಳ ಗ್ರಾಮದಲ್ಲಿ ಸೋಮವಾರ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಡೆಂಘೀ ರೋಗ ಸೊಳ್ಳೆಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೊಳ್ಳೆ ಕಡಿತದಿಂದ ಹರಡುವ ರೋಗ ಈಗ ರಾಜ್ಯದಲ್ಲಿ ಮನೆ ಮನೆಗೆ ವ್ಯಾಪಿಸುತ್ತಿದ್ದು, ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಮನೆಯ ಸುತ್ತ ಕೊಳಚೆ ನೀರು, ಕಸ ಶೇಖರಣೆಯಾಗದಂತೆ ನೋಡಿಕೊಳ್ಳುವ ಕಾರ್ಯ ಮಾಡುವುದು ಅಗತ್ಯವಾಗಿದೆ, ಮನೆಯಲ್ಲಿ ತೆರೆದ ಬಕೆಟ್, ತೆಂಗಿನ ಚಿಪ್ಪು, ಬಾಟಲ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗದ ಲಕ್ಷಣವಾಗಿ ಅತಿಯಾದ ಜ್ವರ, ತಲೆ ಸುತ್ತು, ಸುಸ್ತು ಕಂಡು ಬರುತ್ತವೆ. ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಹೇಳಿದರು.

ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಫ್.ಸಿ. ಹೊಸಮಠ, ಜಿ.ಬಿ. ಬಣಕಾರ, ಬಿ.ಟಿ. ಹಂಚನಾಳ, ವಿಜಯ ದುರಗಣ್ಣವರ, ಹೇಮಾ ಅಗಡಿ ಇವರು ಇದ್ದರು.