ಏಪ್ರಿಲ್‌ 1 ರಿಂದ 15 ರವರೆಗೆ ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬಹುದು.

ಕನ್ನಡಪ್ರಭ ವಾರ್ತೆ ಮೈಸೂರುಜನಗಣತಿಯಿಂದ ಜನರ ಜೀವನದ ಸ್ಥಿತಿಗತಿ ತಿಳಿದುಕೊಳ್ಳಲು ಅನುಕೂಲವಾಗಿದ್ದು, ಇದರಿಂದ ಸರ್ಕಾರ ಹೊಸ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಜನಗಣತಿಯ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಪಟ್ಟಿ ಅಥವಾ ಮನೆ ಸರ್ವೆ ಏ. 1 ರಿಂದ ಮೇ 15 ರವರೆಗೆ ನಡೆಯಲಿದೆ. ಎರಡನೇ ಹಂತದ ವ್ಯಕ್ತಿವಾರು ಸರ್ವೆ ಫೆಬ್ರವರಿ ಮಾಹೆಯಲ್ಲಿ ನಡೆಯಲಿದೆ ಎಂದರು.ಏಪ್ರಿಲ್‌ 1 ರಿಂದ 15 ರವರೆಗೆ ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬಹುದು. ಸಾರ್ವಜನಿಕರು‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂಗಣತಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಮನೆ ಮನೆ ಜನಗಣತಿಗಾಗಿ ಜಿಲ್ಲೆಯಲ್ಲಿ 6013 ಬ್ಲಾಕ್ ರಚಿಸಲಾಗಿದ್ದು, 6540 ಗಣತಿದಾರರು ಹಾಗೂ 1207 ಮೇಲ್ವಿಚರಕರು ಸೇರಿದಂತೆ ಒಟ್ಟು 7748 ಸಿಬ್ಬಂದಿ ನಿಯೋಜಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಜನರ ಆರ್ಥಿಕ ಚಟುವಟಿಕೆ, ಸಾಕ್ಷರತೆ, ಶಿಕ್ಷಣ, ವಸತಿ, ಗೃಹ ಸೌಲಭ್ಯ, ನಗರೀಕರಣ, ಫಲವತ್ತತೆ, ಪ.ಜಾತಿ, ಪ.ಪಂಗಡ, ಭಾಷೆ, ಧರ್ಮ, ವಲಸೆ, ಅಂಗವಕಲ್ಯ ಮತ್ತು ಇತರೆ ಹಲವು ಸಾಮಾಜಿಕ ಸಾಂಸ್ಕೃತಿಕ ದತ್ತಾಂಶ ಪಡೆಯುವುದು ಜನಗಣತಿಯ ಉದ್ದೇಶವಾಗಿದ್ದು, ಜನಗಣತಿಯಲ್ಲಿ ಗಣತಿದಾರರು ನಿಗದಿಪಡಿಸಿರುವ 33 ಪ್ರಶ್ನೆಗಳನ್ನು ಜನರಿಗೆ ಕೇಳಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು. ಜಿಲ್ಲೆಯ ಸಾರ್ವಜನಿಕರು ಜನಗಣತಿ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಜನಗಣತಿಯನ್ನು ಯಶಸ್ವಿಗೊಳಿಸಬೇಕು ಎಂದರು.ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ನಗರಪಾಲಿಕೆ ಉಪ ಆಯುಕ್ತ ಹಾಗೂ ಮೈಸೂರು ನಗರ ಜನಗಣತಿ ಅಧಿಕಾರಿ ಜಿ.ಎಸ್‌. ಸೋಮಶೇಖರ್ ಇದ್ದರು.