ಸಾರಾಂಶ
ಪುನೀತ್ ರಾಜಕುಮಾರ್ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಹಾಗೂ ಪುನೀತ್ ಮತ್ತು ಕನ್ನಡ ಚಿತ್ರಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪುನೀತ್ ರಾಜಕುಮಾರ್ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ಚಲನಚಿತ್ರಗಳನ್ನು ಮನೆ ಮಂದಿಯಲ್ಲಾ ಕುಳಿತು ನೋಡುವಂತಹ ಚಿತ್ರಗಳನ್ನು ಮಾಡಿದರು. ಅವರೊಬ್ಬ ಶ್ರೇಷ್ಠ ನಟ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡದ ಶ್ರೇಷ್ಠ, ಸ್ಫೂರ್ತಿಯ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಹಾಗೂ ಪುನೀತ್ ಮತ್ತು ಕನ್ನಡ ಚಿತ್ರಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುನೀತ್ ಅವರು ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿ ಕೌಟುಂಬಿಕ, ಸಾಮಾಜಿಕ ಮೌಲ್ಯವನ್ನು ಹೆಚ್ಚಿಸಿದವರು. ಅವರ ಎಲ್ಲಾ ಚಿತ್ರಗಳಲ್ಲೂ ಅತ್ಯುತ್ತಮ ಸಂದೇಶಗಳನ್ನು ಕಾಣಬಹುದು. ಕನ್ನಡ ಚಲನಚಿತ್ರರಂಗ ಅವರ ನಿಧನದಿಂದ ಅಪಾರ ನಷ್ಟ ಉಂಟಾಗಿದೆ ಎಂದು ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಪುನೀತ್ ರವರು ಕೋಟಿ ಕೋಟಿ ಯುವಕರಲ್ಲಿ ಅಪ್ಪು ಎಂದೇ ಜನಪ್ರಿಯರು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಮತ್ತು ಹೃದಯವನ್ನು ಅಪ್ಪಿಕೊಂಡು ಜೀವಂತವಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಉಸಿರಾಗಿ ಇಂದಿಗೂ ಇದ್ದಾರೆ. ಅವರ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೀರ್ತಿ ಗೌರವ ಹಾಗೂ ಸ್ಫೂರ್ತಿಯನ್ನು ತಂದಿದೆ ಎಂದು ಹೇಳಿದರು.
ಚಿತ್ರರಂಗದ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸಿದ ರಾಜ್ ಕುಟುಂಬ ಚಾಮರಾಜನಗರದವರು ಎಂಬುದು ಬಹು ಹೆಮ್ಮೆಯಾಗಿದೆ. ಪುನೀತ್ ಅವರ ಜೀವನ ಮೌಲ್ಯಗಳನ್ನು ಅವರ ಸಂದೇಶಗಳನ್ನು ಕನ್ನಡ ಪ್ರೀತಿಯನ್ನು ಸರ್ವರೂ ಸೇರಿ ಮುಂದುವರಿಸೋಣ. ಪುನೀತ್ ಅವರ ಬೆಟ್ಟದ ಹೂವು, ರಾಜಕುಮಾರ, ಮಿಲನ, ಅರಸು, ಹುಡುಗರು ,ಚಕ್ರವ್ಯೂಹ, ರಣ ವಿಕ್ರಮ, ಅಭಿ ,ಮೈತ್ರಿ ಚಿತ್ರಗಳು ಹಾಗೂ ಗಂಧದ ಗುಡಿ ಸಾಕ್ಷ್ಯಚಿತ್ರ ಎಂದೆಂದೂ ಕನ್ನಡಿಗರ ಮನದಲ್ಲಿ ಇರುತ್ತವೆ ಎಂದು ತಿಳಿಸಿದರು.ಹಿರಿಯ ಕನ್ನಡ ಚಳುವಳಿ ಹೋರಾಟಗಾರರಾದ ಚಾ.ವೆಂ.ರಾಜಗೋಪಾಲ್ ರವರು ಪುನೀತ್ ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿ ಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಪದ್ಮ ಪುರುಷೋತ್ತಮ್, ಪಣ್ಯದಹುಂಡಿ ರಾಜು, ಪರಮೇಶ್ವರಪ್ಪ, ಗೋವಿಂದರಾಜು, ಕಾರ್ ಕುಮಾರ್, ನಂಜುಂಡಸ್ವಾಮಿ ಇದ್ದರು.