ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡ ಚಿತ್ರರಂಗದ ಮೇರು ನಟರಾಗಿದ್ದ ಪುನೀತ್‌ರಾಜ್‌ಕುಮಾರ್ ರವರ ಸಾಮಾಜಿಕ ಸೇವೆ, ಆದರ್ಶ ಇಂದಿನ ಯುವ ಜನರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.ನಗರದ ಎಸ್.ಎಸ್.ಪುರಂನಲ್ಲಿ ಮಯೂರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರ ೫೧ನೇ ಹುಟ್ಟುಹಬ್ಬ ಆಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಟ ಪುನೀತ್ ರಾಜ್‌ಕುಮಾರ್ ರವರು ಬದುಕ್ಕಿದ್ದಾಗ ಮಾಡಿರುವ ಸಾಮಾಜಿಕ ಸೇವೆಗಳು ಅವರು ಅಕಾಲಿಕವಾಗಿ ನಿಧನರಾದ ಬಳಿಕ ಇಡೀ ಜಗತ್ತಿಗೆ ಗೊತ್ತಾಯಿತು. ಪುನೀತ್‌ರವರು ತಮ್ಮ ತಂದೆ ಡಾ.ರಾಜ್‌ಕುಮಾರ್ ರವರಂತೆಯೇ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಡಾ. ರಾಜ್‌ಕುಮಾರ್ ರವರ ಹೆಸರಿನಂತೆಯೇ ಪುನೀತ್‌ರಾಜ್‌ಕುಮಾರ್ ರವರ ಹೆಸರು ಸಹ ಸದಾ ಪ್ರಚಲಿತವಾಗಿರುತ್ತದೆ ಎಂದರು.ಮಯೂರ ವೇದಿಕೆ ವತಿಯಿಂದ ಪ್ರತಿ ವರ್ಷವೂ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ವೇದಿಕೆಯ ಸಾಮಾಜಿಕ ಕಳಕಳಿ ಅನುಕರಣೀಯ. ಪುನೀತ್ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಅವರು ಶ್ಲಾಘಿಸಿದರು.ಮಯೂರ ವೇದಿಕೆಯ ಅಧ್ಯಕ್ಷ ಪಿ. ಸದಾಶಿವಯ್ಯ ಮಾತನಾಡಿ, ಕರ್ನಾಟಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ರವರು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪುನೀತ್ ರವರು ಎಲೆಮರೆಕಾಯಿಯಂತೆ ಮಾಡಿರುವ ಸಾಮಾಜಿಕ ಸೇವೆ, ಆರ್ಥಿಕ ಸಹಾಯ ಅವರ ನಿಧನದ ನಂತರ ಬೆಳಕಿಗೆ ಬಂದಿತು. ಪುನೀತ್ ರವರ ಹಾದಿಯಲ್ಲಿ ನಾವೆಲ್ಲರೂ ಶಕ್ತಿ ಮೀರಿ ಸಮಾಜ ಸೇವೆಯಲ್ಲಿ ತೊಡಗೋಣ ಎಂದರು. ನಟ ಪುನೀತ್‌ರಾಜ್‌ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ವೇದಿಕೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಮಯೂರು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ ಮಾತನಾಡಿ, ಮಾದರಿ ವ್ಯಕ್ತಿತ್ವದ ಮೂಲಕ ಹೆಸರಾದ ಪುನೀತ್‌ರಾಜ್‌ಕುಮಾರ್ ಅವರು ಡಾ.ರಾಜ್‌ಕುಮಾರ್ ಕುಟುಂಬದ ಪುತ್ರ ಹಾಗೂ ಈ ನಾಡಿನ ಹೆಮ್ಮೆಯ ಪುತ್ರರಾಗಿದ್ದಾರೆ. ಅವರು ಮಾಡಿದ ಸಮಾಜ ಸೇವಾ ಕಾರ್ಯ ಹಾಗೂ ಆದರ್ಶದ ನಡವಳಿಕೆಯಿಂದಾಗಿ ಪುನೀತ್ ಅವರು ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ ಎಂದರು.ಪುನೀತ್‌ರಾಜ್‌ಕುಮಾರ್ ಅವರು ನಟರಾಗಿ ಪ್ರಸಿದ್ಧರಾಗುವ ಜತೆಗೆ ಬಡವರು, ಅನಾಥರು, ಅಂಧರಿಗೆ ನೆರವಾಗುವಂತಹ ಸಮಾಜ ಸೇವಾ ಕಾರ್ಯ ಮಾಡಿ ಆದರ್ಶದ ವ್ಯಕ್ತಿಯಾಗಿ ನಾಡಿನಲ್ಲಿ ಹೆಸರಾಗಿದ್ದಾರೆ. ಯುವಕರು ಸೇರಿದಂತೆ ನಾವೆಲ್ಲರೂ ಪುನೀತ್‌ರಾಜ್‌ಕುಮಾರ್ ರವರ ಹಾದಿಯಲ್ಲಿ ನಡೆಯೋಣ ಎಂದು ಹೇಳಿದರು.ಮಯೂರ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪುನೀತ್ ರಾಜ್‌ಕುಮಾರ್ ರವರ ೫೧ನೇ ಜನ್ಮದಿನದ ಪ್ರಯುಕ್ತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಸ್.ಎಸ್.ಪುರಂ ಸೇರಿದಂತೆ ವಿವಿಧ ಬಡಾವಣೆಯ ಜನರು ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು

ಈ ಸಂದರ್ಭದಲ್ಲಿ ಮಯೂರ ವೇದಿಕೆಯ ಅಧ್ಯಕ್ಷ ಪಿ. ಸದಾಶಿವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ, ಮುಖಂಡರಾದ ಟಿ.ಬಿ. ಜಗದೀಶ್, ಚಂದ್ರಶೇಖರ್, ವಿನಯ್ ಜೈನ್, ನಾರಾಯಣಗೌಡ, ರಾಜಕುಮಾರ್ ಗುಪ್ತ, ಪತ್ರಕರ್ತ ಉಗಮ ಶ್ರೀನಿವಾಸ್, ರವಿಚಂದ್ರ, ಸ್ವಾಮಿ ಸಿದ್ದು, ಮಂಜೇಶ್ ಮಂಜು ಮತ್ತಿತರರು ಉಪಸ್ಥಿತರಿದ್ದರು.