ದ್ವಾಪರ ಯುಗದಲ್ಲಿ ಕೃಷ್ಣ ಪರಮಾತ್ಮನು ನುಡಿದ ಹಿತೋಪದೇಶಗಳು ಹಾಗೂ ಅವರ ನಡೆದು ಬಂದ ದಾರಿಯನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಬಾಳೋಣ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ದ್ವಾಪರ ಯುಗದಲ್ಲಿ ಕೃಷ್ಣ ಪರಮಾತ್ಮನು ನುಡಿದ ಹಿತೋಪದೇಶಗಳು ಹಾಗೂ ಅವರ ನಡೆದು ಬಂದ ದಾರಿಯನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಬಾಳೋಣ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದರು.ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕೃಷ್ಣನು ಹಿತೋಪದೇಶಗಳ ಮೂಲಕ ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷಣೆಯ ಸಂದೇಶವನ್ನು ಸರ್ವ ಕಾಲಿಕಾವಾಗಿ ಪ್ರತಿಪಾದಿಸಿದ್ದಾನೆ. ಆಧುನಿಕ ಕಾಲದಲ್ಲಿ ಶ್ರೀ ಕೃಷ್ಣನ ತತ್ವ ಸಿದ್ಧಾಂತಗಳು ಆರೋಗ್ಯವಂತ ಸಮಾಜ ಹಾಗೂ ಶಕ್ತಿ ಶಾಲಿ ಭಾರತ ನಿರ್ಮಿಸಿಕೊಡುವ ಮಾರ್ಗದರ್ಶಕ ಸೂತ್ರಗಳಾಗಿವೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗಳು ಸನಾತನ ಹಿಂದೂ ಧರ್ಮದಿಂದ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ, ಭಗವದ್ಗೀತೆ ಇಡೀ ಮಾನವ ಜನಾಂಗಕ್ಕೆ ಬೋಧಿಸಲ್ಪಟ್ಟ ಅಮರ ಕಾವ್ಯ ಎಂದರು.
ಯಾದವ ಸಮಾಜದ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್ ಮಾತನಾಡಿ, ಕೃಷ್ಣ ಪರಮಾತ್ಮನು ಜೀವನದಲ್ಲಿ ನಮಗಿರುವ ಚಿಂತೆಗಳನ್ನು ಭಗವಂತನಿಗೆ ಬಿಟ್ಟು ಕೆಲಸದ ಕಡೆ ಗಮನವಿಟ್ಟು ಕಾಯಕ ಮಾಡು ಫಲಾ ಫಲ ನನಗೆ ಬಿಡು ಎಂದು ಸಾರಿದ್ದು, ಅದರಂತೆ ನಾವು ಜಗತ್ತಲ್ಲಿ ಬಾಳೋಣ ಎಂದರು.ಸಹಾಯಕ ಆಯುಕ್ತ ಶ್ರೀಧರ್ ಗೊಟೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಾಹಿತಿ ಗುರುಪ್ರಸಾದ್ ವೈದ್ಯ ಶ್ರೀ ಕೃಷ್ಣನ ಹಾಗೂ ಭಗವತ್ಗೀತೆಯ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯಾದವ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.