ಸಾರಾಂಶ
ರೋಣ: ಪುರಾಣ-ಪ್ರವಚನಗಳಲ್ಲಿನ ತತ್ವ, ಸಂದೇಶ ಅಳವಡಿಸಿಕೊಂಡಲ್ಲಿ ಮನಸ್ಸು, ಆತ್ಮ ಶುದ್ಧವಾಗುವುದರ ಜತೆಗೆ ವ್ಯಕ್ತಿಯ ಬದುಕು ಪರಿಪೂರ್ಣವಾಗುತ್ತದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಕೊತಬಾಳ ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ಲಿಂ. ರಾಜಶೇಖರ ಶಿವಯೋಗಿಗಳ 24 ನೇ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಯಡೆಯೂರ ಶ್ರೀ ಸಿದ್ದಲಿಂಗೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಧಕರು, ಸಂತ, ಶರಣರು, ಮಹಾತ್ಮರ ಜೀವನ ಆದರ್ಶವಾಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಪುರಾಣ, ಪ್ರವಚನ ಸಮಾಜದಲ್ಲಿ ಉತ್ತಮ ನಾಗರಿಕನ್ನಾಗಿಸುವಲ್ಲಿ ಶ್ರದ್ಧಾ,ಭಕ್ತಿಯಿಂದ ಜೀವನ ಸಾಗಿಸುವಲ್ಲಿ ಮಾರ್ಗದರ್ಶನ ಮಾಡುತ್ತದೆ.ಪ್ರವಚನಗಳಲ್ಲಿನ ಸಾರ ಅರಿತು ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು. ಸಂಕಲ್ಪ ಈಡೇರಬೇಕಾದಲ್ಲಿ ಭಕ್ತಿ ಮಾರ್ಗ ಪ್ರಮುಖವಾಗಿದೆ. ಹಳ್ಳ,ಕೆರೆ,ಬತ್ತ ಬಹುದು ಭಕ್ತಿ ಎಂಬುದು ಎಂದಿಗೂ ಬತ್ತುವದಿಲ್ಲ.ಮಠಗಳ ಮೇಲೆ ಶ್ರದ್ಧಾ,ಭಕ್ತಿ ಇರಬೇಕು. ಸಮಾಜಕ್ಕೆ ಮಠಗಳ ಕೊಡುಗೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕೊತಬಾಳ ಅಡವಿ ಸಿದ್ದೇಶ್ವರ ಮಠ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡುತ್ತಾ ಬಂದಿದೆ ಎಂದರು.
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಕೊತಬಾಳ ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ಜ.7 ರಿಂದ 21ರ ವರೆಗೆ ಪ್ರತಿನಿತ್ಯ ಸಂಜೆ 7.30 ರಿಂದ 9 ಗಂಟೆ ವರೆಗೆ ಯಡೆಯೂರ ಶ್ರೀ ಸಿದ್ದಲಿಂಗೇಶ್ವರ ಜೀವನ ದರ್ಶನ ಕುರಿತು ಪ್ರವಚನ ಜರುಗಲಿದೆ. ಜನತೆ ಇದರ ಸದುಪಯೋಗ ಪಡೆದು ಮನಸ್ಸು,ಆತ್ಮ ಪರಿಶುದ್ಧಗೊಳಿಸಿಕೊಳ್ಳಬೇಕು.ಪ್ರವಚನಗಳಿಂದ ಸದ್ವುಚಾರ, ಸತ್ಸಂಗ, ಸದ್ಗುಣ, ಪರೋಪಕಾರ ಗುಣದ ಜತೆಗೆ ಸದಾ ಜೀವನ ಹಸನ್ಮುಖಿಯಾಗಿ ಕಳೆಯಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಬಸವಂತಪ್ಪ ಹಲಗಿ, ಗ್ರಾಪಂ ಮಾಜಿ ಅಧ್ಯಕ್ಷ ವೀರಣ್ಣ ಯಾಳಗಿ, ಶೇಖಣ್ಣ ಕೋರಿ, ಸಣ್ಣಪ್ಪ ಕೊರ್ಲಳ್ಳಿ, ಬಸೆಟ್ಟೆಪ್ಪ ಅಂಗಡಿ, ಭೀಮವ್ವ ಮುಗಳಿ, ಶಶಿಕಲಾ ಉಮಚಗಿ, ಶಿವು ನೆಲ್ಲೂರ, ನಾಗಪ್ಪ ಕೋಡಿಕೊಪ್ಪದ, ನಿಂಗಪ್ಪ ಮಾದರ, ದ್ಯಾಮಣ್ಣ ಗವಾಯಿಗಳು, ಶಂಕ್ರಣ್ಣ ಉಮಚಗಿ, ಬಸವರಾಜ ಹೂಯಿಲಗೋಳ ಮುಂತಾದವರು ಉಪಸ್ಥಿತರಿದ್ದರು.