ಪುತ್ತೂರು: ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋರಿಯ ಎಂಬಲ್ಲಿರುವ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್‍ಯಕ್ರಮವು ತಂತ್ರಿ ಗೋಪಾಲಕೃಷ್ಣ ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಫೆ. ೧೫ರಿಂದ ೧೭ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ತಿಳಿಸಿದ್ದಾರೆ.

ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೧೪ರಂದು ಸಂಜೆ ಹಸಿರು ವಾಣಿ ಸಮರ್ಪಣೆ ಮೆರವಣಿಗೆ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನಡೆಯಲಿದೆ. ಫೆ. ೧೫ರಂದು ಬೆಳಗ್ಗೆ ನೂತನ ದೈವಸ್ಥಾನದಲ್ಲಿ ಧರ್ಮದೈವ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳು, ಕುಲದೇವರಾದ ಮುದ್ದ- ಕಳಲ, ತನ್ನಿಮಾನಿಗ, ಕೊರಗ ತನಿಯ ಮತ್ತು ಚಾಮುಂಡಿ, ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ.

ಮಧ್ಯಾಹ್ನ ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್‍ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್‍ಯಕ್ರಮ, ಸಂಜೆ ಕುಣಿತ ಭಜನೆ, ಧಾರ್ಮಿಕ ಉಪನ್ಯಾಸ ನಡೆಯಲಿದೆ. ರಾತ್ರಿ ಧರ್ಮದೈವ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.ಫೆ.೧೬ರಂದು ಸಂಜೆ ಕುಣಿತ ಭಜನೆ, ನೃತ್ಯ ವೈಭವ, ಶಾಸಕ ಅಶೋಕ್ ರೈ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಅನ್ನಸಂತರ್ಪಣೆ, ಮೊಗೆರ್ಕಳ ಗರಡಿ ಇಳಿಯುವುದು, ತನ್ನಿಮಾನಿಗ ಗರಡಿ ಇಳಿಯುವುದು ನಡೆಯಲಿದೆ. ಫೆ. ೧೭ರಂದು ಬೆಳಗ್ಗೆ ಕೊರಗ ತನಿಯ ನೇಮೋತ್ಸವ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೆಳ್ಳಿಪ್ಪಾಡಿ ಕಾರ್ತಿಕ್ ರೈ, ಸಂಚಾಲಕ ಮೋಹನ ಪಕಳ ಕುಂಡಾಪು, ಲಕ್ಷ್ಮಣ ಗೌಡ ಕಂಬಳದಡ್ಡ, ಗೌರವ ಸಲಹೆಗಾರ ಸುಂದರ ಸಾಲಿಯಾನ್ ಬಾರ್ಪಾದೆ, ಆಡಳಿತ ಮಂಡಳಿ ಕಾರ್‍ಯದರ್ಶಿ ಜಗದೀಶ್ ಕಜೆ ಉಪಸ್ಥಿತರಿದ್ದರು.