ಪುತ್ತೂರು: ಸ್ಯಾನಿಟರಿ ನ್ಯಾಪ್‌ಕಿನ್ ವೈಜ್ಞಾನಿಕ ನಿರ್ವಹಣೆ ಮಾಹಿತಿ ಕಾರ್ಯಾಗಾರ

| Published : Nov 15 2025, 02:45 AM IST

ಪುತ್ತೂರು: ಸ್ಯಾನಿಟರಿ ನ್ಯಾಪ್‌ಕಿನ್ ವೈಜ್ಞಾನಿಕ ನಿರ್ವಹಣೆ ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳಿಗೆ ಬುಧವಾರನ್‌ ಕಾರ್ಯಾಗಾರ ನೆರವೇರಿತು.

ಪುತ್ತೂರು: ತ್ಯಾಜ್ಯ ವಿಲೇವಾರಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ದೊಡ್ಡ ಕಾರ್ಯವಾಗಿದ್ದು, ಇವುಗಳು ಅಪಾಯಕಾರಿ ಕಸಕ್ಕೆ ಸೇರಿರುವುದರಿಂದ ಸರಳವಾಗಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ರಾಮ್‌ಕಿ ಎನರ್ಜಿ ಮತ್ತು ಎನ್ವಿರಾನ್‌ಮೆಂಟ್ ಲಿಮಿಟೆಡ್ ಸಂಸ್ಥೆಯ ಸಹಕಾರ ಪಡೆಯಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದ್ದಾರೆ.

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳಿಗೆ ಬುಧವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಒಣ ಕಸ ಹಾಗೂ ಹಸಿ ಕಸ ನಿರ್ವಹಣೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದರೆ ಎಲ್ಲೆಂದರಲ್ಲಿ ಡೈಪರ್, ನ್ಯಾಪ್‌ಕಿನ್ ಎಸೆಯುವುದು ಹೆಚ್ಚಾಗಿದ್ದು ಅದರ ವೈಜ್ಞಾನಿಕ ವಿಲೇವಾರಿ ಸವಾಲಾಗಿ ಪರಿಣಮಿಸಿದೆ. ಇವುಗಳ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಇರಲಿಲ್ಲ. ಈಗ ರಾಮ್‌ಕಿ ಸಂಸ್ಥೆ ಈ ಸೇವೆ ನೀಡುತ್ತಿದ್ದಾರೆ. ಅತೀ ಹೆಚ್ಚು ಸ್ಯಾನಿಟರಿ ನ್ಯಾಪ್‌ಕಿನ್ ಸಂಗ್ರಹಿಸುವ ಗ್ರಾ.ಪಂ.ಗಳು ಸಂಸ್ಥೆಯ ಸಹಾಯ ಪಡೆದುಕೊಂಡು ಸ್ವಚ್ಛ, ಸುಂದರ ಗ್ರಾಮ ನಿರ್ಮಿಸಲು ಹೆಜ್ಜೆ ಇಡಬೇಕು ಎಂದರು.

ರಾಮ್‌ಕಿ ಸಂಸ್ಥೆಯ ವ್ಯವಸ್ಥಾಪಕ ಪ್ರಶಾಂತ್ ನಾಯಕ್ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಬಯೋವೇಸ್ಟ್ ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ನಮ್ಮ ಸಂಸ್ಥೆ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ಮಂಡಳಿಯಿಂದ ಅಧಿಕೃತ ಪರವಾನಗಿ ಪಡೆದು ನಾವು ಈ ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದರು. ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕರಾದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ನಾಗೇಶ್ ಎಂ, ಸ್ವಚ್ಛ ಭಾರತ್ ಮಿಷನ್ ಸಮಾಲೋಚಕ ಪವನ್ ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಮಾಲೋಚಕ ನವೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾ.ಪಂ. ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು. ತಾ.ಪಂ. ವಿಷಯ ನಿರ್ವಾಹಕ ಸುರೇಶ್ ಪೂಜಾರಿ ಸಹಕರಿಸಿದರು.