ಸಾರಾಂಶ
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಕೃತ ಉಪನ್ಯಾಸಕಿ ಸಾರಿಕಾ ರಕ್ಷಾಬಂಧನಕ್ಕೆ ಸಂಬಂಧಿಸಿದ ಕಥೆಯೊಂದಿಗೆ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು
ಕನ್ನಡಪ್ರಭ ವಾರ್ತೆ ಪುತ್ತೂರು
ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತದ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣಿಭೂತವಾಗಿದೆ ಎಂದು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಸೋಮವಾರ ನಡೆದ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯ ವಾಕ್ಯಗಳನ್ನು ನಾವು ಕಾಣಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇತರ ದೇಶಗಳಲ್ಲಿ ಸಿಗುವ ಐತಿಹಾಸಿಕ ಸ್ಮಾರಕಗಳ ಕುರುಹಿನ ಮೂಲಕ ಹಿಂದೆ ಇಡೀ ವಿಶ್ವವೇ ಹಿಂದೂ ದೇಶವಾಗಿತ್ತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಇಂತಹ ಕುರುಹುಗಳನ್ನು ನಾಶಗೊಳಿಸುವ ಕೆಲಸ ನಡೆಯುತ್ತಿದೆ. ರಕ್ಷೆಯಲ್ಲಿನ ಎಲ್ಲ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆಯನ್ನು ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆಯನ್ನು ಮಾಡಬೇಕು ಎಂದರು.
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಕೃತ ಉಪನ್ಯಾಸಕಿ ಸಾರಿಕಾ ರಕ್ಷಾಬಂಧನಕ್ಕೆ ಸಂಬಂಧಿಸಿದ ಕಥೆಯೊಂದಿಗೆ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಆಕರ್ಷ್ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಹಿತಾಲಿ ಪಿ. ಶೆಟ್ಟಿ ಸ್ವಾಗತಿಸಿದರು. ಅದ್ವೈತಕೃಷ್ಣ ವಂದಿಸಿದರು. ನಿಯತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.